ಮಸ್ಕಿ ಜಲಾಶಯಕ್ಕೆ ಬಾಗಿನ ಅರ್ಪಣೆ
ಮಸ್ಕಿ: ತಾಲೂಕಿನ ಪಾಮನಕೆಲ್ಲೂರು ಸೇರಿ ನಾಲ್ಕು ಗ್ರಾಪಂ ವ್ಯಾಪ್ತಿಯ ಹಳ್ಳಿಗಳಿಗೆ ಹರಿ ನೀರಾವರಿ ಸೌಲಭ್ಯ ಕಲ್ಪಿಸುವ ವಟಗಲ್ ಬಸವೇಶ್ವರ ಏತ ಹರಿ ನೀರಾವರಿ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.
ಮಸ್ಕಿ ಜಲಾಶಯಕ್ಕೆ ಸೋಮವಾರ ಬಾಗಿನ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ವಟಗಲ್ ಬಸವೇಶ್ವರ ಏತ ಹರಿ ನೀರಾವರಿ ಯೋಜನೆಗೆ ಈಗಾಗಲೇ ಡಿಪಿಆರ್ ಸಿದ್ಧಪಡಿಸಲಾಗಿದೆ. ಈ ಯೋಜನೆ ಸ್ಥಗಿತಗೊಳಿಸುವಂತೆ ಶಾಸಕ ಆರ್. ಬಸನಗೌಡ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಆರೋಪಿಸಿದರು.
ಮಸ್ಕಿ ನಾಲಾ ಯೋಜನೆ ವ್ಯಾಪ್ತಿಯ ಕಾಲುವೆಗಳ ಅಧುನೀಕರಣಕ್ಕೆ ಸರ್ಕಾರ 52 ಕೋಟಿ ರೂ. ಅನುದಾನ ನೀಡಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಕಾಲುವೆಗೆ ನೀರು ಸ್ಥಗಿತಗೊಂಡ ನಂತರ ಕಾಮಗಾರಿ ಆರಂಭಿಸಲಾಗುವುದು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕ್ಷೇತ್ರದ ವಿವಿಧ ಯೋಜನೆಗಳಿಗೆ ಸಾಕಷ್ಟು ಅನುದಾನ ನೀಡಿದೆ. ಈಗಾಗಲೇ ಕೆಲವು ಕಾಮಗಾರಿಗಳು ಪೂರ್ಣಗೊಂಡಿವೆ. ಕೆಲವೊಂದು ಟೆಂಡರ್ ಪೂರ್ಣಗೊಂಡಿವೆ ಎಂದರು.
ಮುಂಬರುವ ಜಿಲ್ಲಾ ಹಾಗೂ ತಾಪಂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಈಗಾಗಲೇ ಗ್ರಾಪಂ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸುವ ಕೆಲಸ ಮಾಡಲಾಗುತ್ತಿದೆ. ಜಿಪಂ, ತಾಪಂ ಹಾಗೂ 2023ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.
ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಸಿದ್ಧರಾಮಣ್ಣ ಸಾಹುಕಾರ, ಬಸವಂತರಾಯ ಕುರಿ, ಬಸವರಾಜ ಸ್ವಾಮಿ, ಅಮರೇಗೌಡ ವಿರುಪಾಪುರ, ಶಿವನಗೌಡ ಗೊರೆಬಾಳ, ವಿಶ್ವನಾಥ ರೆಡ್ಡಿ ಅಮೀನಗಡ, ದುರಗಪ್ಪ ಗುಡಗಲದಿನ್ನಿ, ಜಗದೀಶ್ಚಂದ್ರ ತಾತ, ಯರ್ರಿತಾತ, ಚಂದ್ರಶೇಖರ ವಕೀಲ, ಶಿವಕುಮಾರ ವಟಗಲ, ಬಿಜೆಪಿ ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ, ಶರಣಯ್ಯ ಸೊಪ್ಪಿಮಠ, ಮಲ್ಲು ಯಾದವ್ ಇದ್ದರು.