ಮಸ್ಕಿ: ಸಣ್ಣ ಪ್ರಮಾಣದ ಕಾಯಿಲೆಗಳಿಗೆ ಆಸ್ಪತ್ರೆಗಳ ಮೇಲೆ ಅವಲಂಬಿತರಾಗಿ ಹಣ ಪೋಲು ಮಾಡಿಕೊಳ್ಳುವ ಬದಲಿಗೆ ಅಡುಗೆ ಮನೆಯಲ್ಲಿರುವ ಪದಾರ್ಥಗಳನ್ನು ಬಳಸಿಕೊಂಡು ಆರೋಗ್ಯವಾಗಿರಿ ಎಂದು ಡಾ.ನಿರ್ಮಲಾ ಕೆಳಮನಿ ಹೇಳಿದರು.
ಪಟ್ಟಣದ ಶ್ರೀ ಮಲ್ಲಿಕಾರ್ಜುನ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆವರಣದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದಿಂದ ಭಾನುವಾರ ಆಯೋಜಿಸಿದ್ದ ಮಹಿಳೆಯರಿಗಾಗಿ ಮನೆ ಮದ್ದು ಹಾಗೂ ಮಾನವೀಯ ಸಂಬಂಧಗಳ ಕುರಿತ ಕಾರ್ಯಗಾರದಲ್ಲಿ ಮಾತನಾಡಿದರು.
ನೆಗಡಿ, ಕೆಮ್ಮು, ಕಫ, ಉದರ ದೋಷಗಳು, ಮುಟ್ಟು, ತಲೆಕೂದಲು ಉದುರುವಿಕೆ, ಮೈ-ಕೈ ನೋವು ನಾನಾ ಕಾಯಿಲೆಗಳಿಗೆ ಆಸ್ಪತ್ರೆ ಮೇಲೆ ಹೆಚ್ಚು ಅವಲಂಬಿತರಾಗಬಾರದು. ಸಾಸಿವೆ, ಜೀರಿಗೆ, ಅರಿಶಿಣಪುಡಿ, ಮೆಂತೆ ಕಾಳು, ಬಳ್ಳೊಳ್ಳಿ, ಈರುಳ್ಳಿ, ಕರಿಬೇವು, ತರಕಾರಿ, ಹಣ್ಣು ಮುಂತಾದವುಗಳನ್ನು ಬಳಸಿಕೊಂಡು ಔಷಧದ ರೂಪದಲ್ಲಿ ಸೇವನೆ ಮಾಡಿದರೆ ರೋಗಗಳು ಬರುವುದಿಲ್ಲ ಎಂದರು.
ವಿಕಾಸ ಅಕಾಡೆಮಿ ಸಂಚಾಲಕ ವೀರೇಶ ಸೌದ್ರಿ ಮಾತನಾಡಿ, ವಿಕಾಸ ಅಕಾಡಮಿ ಮತ್ತು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದಿಂದ ಕೃಷಿ, ಮಹಿಳೆ, ವಿದ್ಯಾರ್ಥಿ, ಆರೋಗ್ಯ, ಶಿಕ್ಷಣಕ್ಕೆ ಸಂಬಂಧಿಸಿದಂತೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಪ್ರಮುಖರಾದ ಅಮರೇಶ ಹರಸೂರು, ಹನುಮೇಶ ನಾಯಕ, ಮಂಜುನಾಥ, ದೇವರಾಜ, ಸಾದಿಕ್, ಪ್ರಮೀಳಾ ದಾಸರ್, ದುರ್ಗಮ್ಮ ಇತರರಿದ್ದರು.