More

    ನಿಮಗೆಲ್ಲ ಮಸಾಲಾ ಮುಗಿಯಿತು ಫ್ರೆಂಡ್ಸ್​! ಗಂಭೀರ್​ ಅಪ್ಪುಗೆ ಕುರಿತು ಕೊನೆಗೂ ಮೌನ ಮುರಿದ ಕೊಹ್ಲಿ

    ನವದೆಹಲಿ: ಟೀಮ್​ ಇಂಡಿಯಾದ ಮಾಜಿ ಆಟಗಾರ ಗೌತಮ್​ ಗಂಭೀರ್​ ಮತ್ತು ಸ್ಟಾರ್​ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ ಬಹುದಿನಗಳಿಂದ ಕಿತ್ತಾಡಿಕೊಳ್ಳುತ್ತಿದ್ದ ಸಂಗತಿ ಕ್ರಿಕೆಟ್​ ಅಭಿಮಾನಿಗಳಿಗೆ ಗೊತ್ತಿದೆ. ಇಬ್ಬರು ಎದುರು-ಬದುರಾದರೆ ಸಾಕು ಅಲ್ಲಿ ಮಾತಿನ ಚಕಮಕಿ ತಪ್ಪುತ್ತಿರಲಿಲ್ಲ. ಇಬ್ಬರ ಜಗಳಕ್ಕೆ ಬಹುತೇಕ ಮಂದಿ ಸಾಕ್ಷಿಯಾಗಿದ್ದಾರೆ. ಆದರೆ, ಕಳೆದ ಮಾರ್ಚ್​ 29ರಂದು ಬೆಂಗಳೂರಿನಲ್ಲಿ ನಡೆದ ಕೆಕೆಆರ್​ vs ಆರ್​ಸಿಬಿ ನಡುವಿನ ಪಂದ್ಯದ ವೇಳೆ ಆಗಿದ್ದೆಲ್ಲವೂ ಉಲ್ಟಾಪಲ್ಟಾ!

    ಈ ಪಂದ್ಯದಲ್ಲಿ ಆರ್​ಸಿಬಿ ಇನಿಂಗ್ಸ್​ನ 16ನೇ ಓವರ್​ ಬಳಿಕ ನೀಡಿದ ಟೈಮ್​ಔಟ್​ ವೇಳೆ ಅಂಗಣಕ್ಕೆ ಆಗಮಿಸಿದ ಗಂಭೀರ್​, ನಸುನಗುತ್ತಲೆ ಕೊಹ್ಲಿಯನ್ನು ಅಪ್ಪಿಕೊಂಡರು. ಈ ಮೂಲಕ ಇಬ್ಬರೂ ಹಿಂದಿನ ವೈಮನಸ್ಯ ಮರೆತಿರುವುದನ್ನು ಸ್ಪಷ್ಟಪಡಿಸಿದರು. ದೆಹಲಿಯವರಾದ ಇಬ್ಬರ ಮುಖದಲ್ಲೂ ನಗು ಬಹುಕಾಲದ ನಂತರ ಭೇಟಿಯಾದ ಸ್ನೇಹಮಿಲನದಂತಿತ್ತು. ಇಬ್ಬರು ಅಪ್ಪಿಕೊಂಡ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಅಲ್ಲದೆ, ಎಕ್ಸ್​ನಲ್ಲಿ ಟ್ರೆಂಡ್​ ಕೂಡ ಆಗಿತ್ತು.

    ಇದೀಗ ಕೊಹ್ಲಿ ಈ ವಿಚಾರವಾಗಿ ಮೌನ ಮುರಿದಿದ್ದಾರೆ. ಪೂಮಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಅಭಿಮಾನಿಗಳೊಂದಿಗೆ ಸಂವಾದ ನಡೆಸುವಾಗ ಕೊಹ್ಲಿ ಹಾಸ್ಯ ಚಟಾಕಿ ಹಾರಿಸಿದ್ದಾರೆ. ನನ್ನ ಮತ್ತು ಗಂಭೀರ್​ ನಡುವೆ ಇನ್ಮುಂದೆ ಯಾವುದೇ ಜಗಳ ಇಲ್ಲದಿರುವುದಿಂದ ಜನರು ತುಂಬಾ ನಿರಾಸೆಗೊಂಡಿದ್ದಾರೆ ಎಂದು ಜೋಕ್ಸ್​ ಮಾಡಿದ್ದಾರೆ.

    ನನ್ನ ವರ್ತನೆಯಿಂದ ಜನರು ತುಂಬಾ ನಿರಾಸೆಗೊಂಡಿದ್ದಾರೆ. ನಾನು ಮೊದಲು ನವೀನ್​ ಉಲ್ ಹಕ್​ರನ್ನು ಅಪ್ಪಿಕೊಂಡೆ. ಇದಾದ ಬಳಿಕ ಗಂಭೀರ್​ ಭಾಯ್​ ನನ್ನನ್ನು ಅಪ್ಪಿಕೊಂಡರು. ಅಂದರೆ ನಿಮಗೆಲ್ಲ ಮಸಾಲಾ ಮುಗಿದಿದೆ ಎಂದರ್ಥ. ನಾವಿನ್ನೂ ಮಕ್ಕಳಲ್ಲ ಎಂದು ಕೊಹ್ಲಿ ಹಾಸ್ಯ ಚಟಾಕಿ ಹಾರಿಸಿದರು.

    2013ರಲ್ಲಿ ಮೊದಲ ಬಾರಿಗೆ ಐಪಿಎಲ್​ನಲ್ಲಿ ಕೊಹ್ಲಿ ಮತ್ತು ಗಂಭೀರ್​ ಮೈದಾನದಲ್ಲಿ ಕಿತ್ತಾಡಿಕೊಂಡರು. ಅಂದಿನಿಂದ ಇಬ್ಬರ ನಡುವೆ ಪ್ರತಿ ಸೀಸನ್​ನಲ್ಲೂ ಕಿತ್ತಾಟ ಮುಂದುವರಿದಿತ್ತು. ಕಳೆದ ಸೀಸನ್​ನಲ್ಲಂತೂ ಇಬ್ಬರ ನಡುವಿನ ವಾಗ್ವಾದ ತಾರಕಕ್ಕೇರಿತ್ತು. ಆದರೆ, ತಮ್ಮ ನಡುವಿನ ಎಲ್ಲ ಮನಸ್ತಾಪಗಳು ಈ ಸೀಸನ್​ನಲ್ಲಿ ಕೊನೆಯಾಗಿದೆ. ಈ ಹಿನ್ನೆಲೆಯಲ್ಲಿ ಕೊಹ್ಲಿ ಇದೇ ಸಂದರ್ಭವನ್ನು ಮುಂದಿಟ್ಟುಕೊಂಡು ಹಾಸ್ಯ ಚಟಾಕಿ ಹಾರಿಸಿದ್ದಾರೆ. (ಏಜೆನ್ಸೀಸ್​)

    VIDEO: ಚಿನ್ನಸ್ವಾಮಿಯಲ್ಲಿ ಈ ಸಲ ಕೊಹ್ಲಿ-ಗಂಭೀರ್​ ಜಗಳವಲ್ಲ, ಆಲಿಂಗನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts