ಹುಬ್ಬಳ್ಳಿ: ಜೆಡಿಎಸ್ನ ಮರಿತಿಬ್ಬೇಗೌಡ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಗುರುವಾರ ರಾಜೀನಾಮೆ ಸಲ್ಲಿಸಿದ್ದಾರೆ.
ಸಭಾಪತಿ ಬಸವರಾಜ ಹೊರಟ್ಟಿಯವರನ್ನು ಹುಬ್ಬಳ್ಳಿಯಲ್ಲಿನ ಅವರ ಗೃಹ ಕಚೇರಿಯಲ್ಲಿ ಗುರುವಾರ ಭೇಟಿ ಮಾಡಿದ ಮರಿತಿಬ್ಬೇಗೌಡ, ರಾಜೀನಾಮೆ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ನಿರ್ಲಕ್ಷ್ಯಂದ ನಾನು ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಜೆಡಿಎಸ್ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೂ ರಾಜೀನಾಮೆ ಪತ್ರ ರವಾನಿಸಿದ್ದೇನೆ. 2-3 ದಿನದಲ್ಲಿ ನನ್ನ ನಿರ್ಧಾರ ಪ್ರಕಟಿಸುತ್ತೇನೆ ಎಂದು ಹೇಳಿದರು.
ನಾನು ನಾಲ್ಕು ಸಲ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ಗೆ ಆಯ್ಕೆಯಾಗಿದ್ದೇನೆ. ಇದರಲ್ಲಿ ಎರಡು ಬಾರಿ ಜೆಡಿಎಸ್ನಿಂದ ಆಯ್ಕೆಯಾಗಿದ್ದೇನೆ. ಜೆಡಿಎಸ್ ನಾಯಕರು ನನ್ನನ್ನು ದಿನದಿಂದ ದಿನಕ್ಕೆ ಕಡೆಗಣಿಸಲಾರಂಭಿಸಿದರು ಎಂದು ದೂರಿದರು.
ರಾಜಕಾರಣದಲ್ಲಿ ಇಲ್ಲದವರಿಗೆ ಟಿಕೆಟ್ ಕೊಟ್ಟರು. ನಿಖಿಲ್ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧಿಸುವುದು ಬೇಡವೆಂದೆ. ಬೇರೆಯವರಿಗೆ ಟಿಕೆಟ್ ಕೊಟ್ಟರೆ ಅನ್ಯ ಮಾರ್ಗ ತುಳಿಯುವುದಾಗಿ ಹೇಳಿದೆ. ಇದೆಲ್ಲವನ್ನೂ ಗಮನಿಸಿದ ವರಿಷ್ಠರು ನನ್ನನ್ನು ಕಡೆಗಣಿಸಲಾರಂಭಿಸಿದರು. ಬಸವರಾಜ ಹೊರಟ್ಟಿ ನನ್ನ ರಾಜಕೀಯ ಗುರು. ಜೆಡಿಎಸ್ ನಾಯಕರು ಬಿಜೆಪಿ ಸೇರಿ ಮೊಸಳೆ ಮೇಲೆ ಸವಾರಿ ಮಾಡುತ್ತಿದ್ದಾರೆ. ಕುಟುಂಬದ ಪಕ್ಷ ಜೆಡಿಎಸ್ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಆದರೂ ಅವರೊಟ್ಟಿಗೆ ಕೈ ಜೋಡಿಸಿದ್ದಾರೆ ಎಂದು ಆರೋಪಿಸಿದರು.
ರಾಜೀನಾಮೆ ಅಂಗೀಕಾರ:
ಮರಿತಿಬ್ಬೇಗೌಡ ಅವರ ರಾಜೀನಾಮೆ ಪತ್ರವನ್ನು ನಿಯಮದಂತೆ ಅಂಗೀಕರಿಸುವುದಾಗಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.