ಬೆಂಗಳೂರು: ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ಇಂದಿನ ಕರ್ನಾಟಕ ಬಂದ್ಗೆ ವ್ಯಾಪಾರಸ್ಥರು ಮತ್ತು ಇತರರು ನೈತಿಕ ಬೆಂಬಲ ವ್ಯಕ್ತಪಡಿಸುತ್ತಿದ್ದು, ಬಂದ್ ಮಾಡುವುದಕ್ಕಾಗದು. ಈಗಾಗಲೇ ಕೋವಿಡ್ ಕಾರಣಕ್ಕೆ ನಷ್ಟ ಅನುಭವಿಸಿದ್ದಾಗಿದೆ. ಇನ್ನೂ ಆರ್ಥಿಕ ಹೊಡೆತ ಎದುರಿಸಲಾಗದು ಎಂಬ ಭಾವನೆ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಿರುವ ವರದಿಗಳೂ ಬರತೊಡಗಿವೆ.
ಧಾರವಾಡ: ಧಾರವಾಡ ಮಾರುಕಟ್ಟೆಗಿಲ್ಲ ಬಂದ್ ಬಿಸಿ ತಟ್ಟಿಲ್ಲ. ಎಂದಿನಂತೆ ಎಪಿಎಂಸಿ ವಹಿವಾಟು ಶುರುವಾಗಿದ್ದು, ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಯುತ್ತಿದೆ. ಬಸ್, ಇತರೆ ವಾಹನ ಓಡಾಟವೂ ಎಂದಿನಂತೆಯೇ ಇದೆ. ಪ್ರತಿಭಟನಾಕಾರರು ಇನ್ನೂ ಬೀದಿಗೆ ಇಳಿದಿಲ್ಲ.
ಇದನ್ನೂ ಓದಿ: ಇಂದು ಕೇಂದ್ರ-ರೈತರ ನಿರ್ಣಾಯಕ ಸಭೆ; 8ರಂದು ಭಾರತ ಬಂದ್ಗೆ ಕರೆ ನೀಡಿದ ರೈತ ಸಂಘಟನೆಗಳು
ಚಾಮರಾಜನಗರ: ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರಿಂದ ಪ್ರತಿಭಟನೆ ವ್ಯಕ್ತವಾಗಿದೆ. ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಅವರು, ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಹಿನ್ನಲೆ ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಂಡುಬಂದಿದೆ. ಬಸ್, ವಾಹನಗಳ ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗಿಲ್ಲ. ಎಂದಿನಂತೆ ಜನ ಸಂಚಾರವೂ ಇದೆ.
ಕರ್ನಾಟಕ ಬಂದ್ ಹಿನ್ನೆಲೆ ನಗರದ ಭುವನೇಶ್ವರಿ ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚಿದ ಪ್ರತಿಭಟನೆ ನಡೆಸುತ್ತಿದ್ದ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಉರಿಯುತ್ತಿದ್ದ ಟೈರ್ ಗಳ ಮುಂದೆ ಮಲಗಿ ಪ್ರತಿಭಟಿಸುತ್ತಿದ್ದರು. ಕರ್ನಾಟಕ ಸೇನಾ ಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸ ಗೌಡ, ಶಾ.ಮುರುಳಿ, ನಿಜಧ್ವನಿಗೋವಿಂದ ರಾಜು ಮತ್ತು ಇತರರ ಬಂಧನವಾಗಿದೆ.
ಇದನ್ನೂ ಓದಿ: ಜನರಿಗೆ ತೊಂದರೆಯಾಗದಿರಲಿ; ಪ್ರತಿಭಟನೆಯ ಹಕ್ಕು ಚೌಕಟ್ಟು ಮೀರಬಾರದು…
ಬೆಂಗಳೂರು: ಎಂದಿನಂತೆ ವ್ಯಾಪಾರ ವಹಿವಾಟುಗಳು ಆರಂಭವಾಗಿವೆ. ಬಸ್ ಸಂಚಾರವೂ ನಿತ್ಯದಂತೆಯೇ ಇದ್ದು, ಬಹುತೇಕರು ಬಂದ್ಗೆ ನೈತಿಕ ಬೆಂಬಲ ನೀಡಿದ್ದಾರೆಯೇ ಹೊರತು, ಬಂದ್ ಮಾಡುವ ಮನಸ್ಸು ಮಾಡಿಲ್ಲ. ಈ ನಡುವೆ, ಅಲ್ಲಲ್ಲಿ ಕನ್ನಡಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: ಮರಾಠ ನಿಮಗ ಸ್ಥಾಪನೆಗೆ ವಿರೋಧ- ಕರ್ನಾಟಕ ಬಂದ್ಗೆ ಅನುಮತಿ ಇಲ್ಲ: ಎಡಿಜಿಪಿ
ಚಿತ್ರೋದ್ಯಮಕ್ಕೆ ಇಲ್ಲ ಬಿಸಿ: ಚಿತ್ರೋದ್ಯಮಕ್ಕೆ ಬಂದ್ ಬಿಸಿ ತಟ್ಟಿಲ್ಲ. ಎಂದಿನಂತೆ ಚಿತ್ರ ಪ್ರದರ್ಶನಗಳು ನಡೆಯಲಿವೆ. ಚಿತ್ರಗಳ ಶೂಟಿಂಗ್ ಕೂಡ ನಡೆಯಲಿವೆ. ಪ್ರಿ-ಪ್ರೊಡಕ್ಷನ್ ಹಾಗೂ ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ಸಕ್ರಿಯವಾಗಿವೆ. ಕರ್ನಾಟಕ ಬಂದ್ ಗೆ ಚಿತ್ರರಂಗದ ನೈತಿಕ ಬೆಂಬಲ ವ್ಯಕ್ತಪಡಿಸಿದ್ದು, ಗಾಂಧಿನಗರದ ಚಟುವಟಿಕೆಗಳು ಎಂದಿನಂತೆಯೇ ಇರಲಿದೆ ಎಂದು ಮೂಲಗಳು ತಿಳಿಸಿವೆ.
ಬಸ್ಗೆ ಕಲ್ಲೆಸೆದ ಕಿಡಿಗೇಡಿಗಳು: ಬೆಂಗಳೂರಿನ ಹೊರವಲಯದ ಹಳೇಚಂದಾಪುರದಲ್ಲಿ ಬಿಎಂಟಿಸಿ ಬಸ್ಗೆ ಕಿಡಿಗೇಡಿಗಳು ಕಲ್ಲೆಸೆದು ಪರಾರಿಯಾಗಿದ್ದಾರೆ. ಪರಿಣಾಮ ಬಸ್ಸಿನ ಹಿಂಬದಿಯ ವಿಂಡ್ ಶೀಲ್ಡ್ ಪುಡಿಯಾಗಿದೆ.
ಉಡುಪಿಯಲ್ಲಿ ನೋ ಬಂದ್: ಖಾಸಗಿ, ಸರ್ಕಾರಿ ಬಸ್ ಸಂಚಾರ ಯಥಾಸ್ಥಿತಿ ಇದ್ದು, ಆಟೋ ಸಂಚಾರವೂ ಅಬಾಧಿತ. ಮುಂಜಾನೆಯೇ ಅಂಗಡಿ ಮುಂಗಟ್ಟುಗಳು ತೆರೆದಿದ್ದು, ರಾಜ್ಯ ಸಂಘಟನೆಗಳು ಬಿಟ್ರೆ ಸ್ಥಳೀಯ ಯಾವುದೇ ಘಟಕಗಳು ಬಂದ್ಗೆ ಕರೆ ನೀಡಿಲ್ಲ. ಕರಾವಳಿ ಭಾಗದಲ್ಲಿ ಕನ್ನಡ ಸಂಘಟನೆಗಳು ಸಕ್ರಿಯವಾಗಿಲ್ಲ. ರಾಜಕೀಯವಾಗಿಯೂ ಇಲ್ಲಿ ಬಂದ್ಗೆ ಬೆಂಬಲ ವ್ಯಕ್ತವಾಗಿಲ್ಲ.
ಗದಗ : ಗದಗ ನಗರದ ಮುಳಗುಂದ ನಾಕಾದಲ್ಲಿ ಕನ್ನಡಪರ ಸಂಘಟನೆ ಕಾರ್ಯಕರ್ತರ ಪ್ರತಿಭಟನೆ ಕಾರಣ ಪೊಲೀಸರ ಜಮಾವಣೆಯಾಗಿದೆ. ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟಿದ್ಧಾರೆ. ಎಂದಿನಂತೆ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಶುರುವಾಗಿದೆ. ಅಂಗಡಿ ಮುಂಗಟ್ಟುಗಳು ಓಪನ್, ಎಂದಿನಂತೆ ವಾಹನಗಳ ಓಡಾಟ ನಡೆಸುತ್ತಿವೆ. ಈ ನಡುವೆ, ಗದಗ- ಹುಬ್ಬಳ್ಳಿ ರಸ್ತೆ ಬಂದ್ ಮಾಡಿ ಕನ್ನಡಪರ ಸಂಘಟನೆಗಳವರು ಪ್ರತಿಭಟನೆ ನಡೆಸಿದ್ದಾರೆ. ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಆಕ್ರೋಶ. ಪ್ರತಿಭಟನೆ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.
ಮಂಡ್ಯ : ಕೆಎಸ್ಆರ್ಟಿಸಿ ಬಸ್, ಆಟೋ ಸಂಚಾರ ಎಂದಿನಂತೆಯೇ ಇದ್ದು, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿಯೂ ಎಂದಿನಂತೆ ವಾಹನ ಸಂಚಾರವಿದೆ. ಬಂದ್ಗೆ ಮಂಡ್ಯದಲ್ಲಿ ಆರಂಭಿಕವಾಗಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದಾಗ್ಯೂ, ಮಂಡ್ಯ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ವಿನೂತನ ಪ್ರತಿಭಟನೆ ವ್ಯಕ್ತವಾಗಿದೆ. ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಎಮ್ಮೆಗೆ ಸಿಎಂ ಬಿಎಸ್ವೈ ಪೋಟೋ ಹಾಕಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಸನ: ಮರಾಠ ಪ್ರಾಧಿಕಾರ ರಚನೆ ವಿರೋಧಿಸಿ ರಾಜ್ಯ ಬಂದ್ ಗೆ ಕರೆ ಹಿನ್ನೆಲೆ. ಸಾರಿಗೆ ಬಸ್ ಹಾಗೂ ಇತರೆ ಸಂಚಾರ ಯಥಾಸ್ಥಿತಿ ಇದೆ. ಇಂದಿನ ಬಂದ್ ಗೆ ಬೆಂಬಲ ಸೂಚಿಸಿರುವ ಹಲವು ಕನ್ನಡಪರ ಸಂಘಟನೆಗಳು, ಆಟೋ ಚಾಲಕರು, ವರ್ತಕರು ಹಾಗೂ ಸಾರ್ವಜನಿಕರಲ್ಲಿ ಬಂದ್ ಬೆಂಬಲಿಸುವಂತೆ ಮನವಿ ಮಾಡಿದ್ದರಾದರೂ ಬೆಳಗ್ಗೆ ಬಂದ್ ಗೆ ಬೆಂಬಲ ವ್ಯಕ್ತವಾಗಿಲ್ಲ. ಅನೇಕ ಕಡೆ ತೆರೆದಿರುವ ಅಂಗಡಿ ಮುಂಗಟ್ಟು, ಹೋಟೆಲ್ ಗಳಲ್ಲಿ ವ್ಯಾಪಾರ ವಹಿವಾಟು ಶುರುವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದಾರೆ.
ದಾವಣಗೆರೆ : ಪ್ರತಿಭಟನೆಗೆ ಸೀಮಿತವಾಗಿತ್ತು ಕರ್ನಾಟಕ ಬಂದ್. ಜನಜೀವನ ಎಂದಿನಂತಿತ್ತು. ಅಂಗಡಿ, ಹೋಟೆಲ್ಗಳು ತೆರೆದಿದ್ದವು. ಸರ್ಕಾರಿ ಕಚೇರಿ ಬ್ಯಾಂಕುಗಳು ಕಾರ್ಯ ನಿರ್ವಹಿಸಿದವು. ಕೆಎಸ್ಸಾರ್ಟಿಸಿ ಮತ್ತು ಖಾಸಗಿ ಬಸ್ ಗಳು, ನಗರ ಸಾರಿಗೆ ಬಸ್ ಗಳು, ಆಟೋಗಳ ಸಂಚಾರ ಎಂದಿನಂತಿತ್ತು.
ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಜಯದೇವ ವೃತ್ತದಲ್ಲಿ ಉರುಳುಸೇವೆ, ಮಾನವ ಸರಪಳಿ ನಿರ್ಮಾಣ, ಪ್ರತಿಕೃತಿ ದಹನ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದರು.
ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕರ್ನಾಟಕ ಬಂದ್- ರಾಜಕೀಯ ನಿಲುವುಗಳೇನು?