ವಿಜಯವಾಣಿ ಸುದ್ದಿಜಾಲ ಹಾನಗಲ್ಲ
ವೋಕಲ್ ಟು ಲೋಕಲ್ ಮೆಕ್ ಇಟ್ ಗ್ಲೋಬಲ್, ಮೇಕ್ ಇನ್ ಇಂಡಿಯಾಕ್ಕೆ ಒತ್ತು ನೀಡಿ, ಅದಕ್ಕೆ ಪೂರಕವಾದ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ, ಆತ್ಮನಿರ್ಭರ ಭಾರತದ ಪರಿಣಾಮಕಾರಿ ಯಶಸ್ಸಿಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದೆ ಎಂದು ಸಂಸದ ಶಿವಕುಮಾರ ಉದಾಸಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಆತ್ಮನಿರ್ಭರ ಭಾರತದ 20 ಲಕ್ಷ ಕೋಟಿ ರೂ. ಅನುದಾನದ ಜತೆಯಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ 1.70 ಲಕ್ಷ ಕೋಟಿ ರೂ. ಘೊಷಿಸಲಾಗಿದೆ. ಕೈಗಾರಿಕೆಗಳ ಸಮಸ್ಯೆಗಳ ಒತ್ತಡ ಕಡಿಮೆಗೊಳಿಸುವ ನಿಟ್ಟಿನಲ್ಲಿ 20 ಸಾವಿರ ಕೋಟಿ ರೂ. ಗ್ಯಾರಂಟಿ ಸ್ಕಿಂ ಜಾರಿಗೆ ತರಲಾಗಿದೆ. ದೇಶದಲ್ಲಿ ಲಾಕ್ಡೌನ್ ಜಾರಿಗೊಂಡ ಕೆಲವೇ ದಿನಗಳಲ್ಲಿ ಕೇಂದ್ರ 1.70 ಲಕ್ಷ ಕೋಟಿ ರೂ. ಮೊತ್ತದ ವಿಸ್ತತವಾದ ಯೋಜನೆ ಜಾರಿಗೆ ತಂದಿತ್ತು. ಇದರಡಿ 80 ಕೋಟಿ ಜನರಿಗೆ ಉಚಿತ ಪಡಿತರ ಹಾಗೂ 36 ಕೋಟಿ ಬ್ಯಾಂಕ್ ಖಾತೆಗಳಿಗೆ 64,500 ಕೋಟಿ ಮೊತ್ತವನ್ನು ಜೂ. 28ರೊಳಗಾಗಿ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕಿಸಾನ್ ಕ್ರೆಡಿಟ್ ಕಾರ್ಡ್ ರೈತರಿಗೆ ವಿತರಿಸುವ ಮೂಲಕ ಅವರ ಅವಶ್ಯಕತೆಗೆ ಅನುಗುಣವಾಗಿ ಸಾಲ ನೀಡುವ ಯೋಜನೆಯಡಿ ಈತನಕ ದೇಶದ 70.32 ಲಕ್ಷ ಕಾರ್ಡ್ ವಿತರಿಸಲಾಗಿದೆ. 2 ಲಕ್ಷ ಕೋಟಿ ರೂ. ರಿಯಾಯ್ತಿ ಸಾಲ ನೀಡುವ ಈ ಯೋಜನೆಯಲ್ಲಿ ಈತನಕ 62 ಸಾವಿರ ಕೋಟಿ ರೂ. ವಿತರಣೆಯಾಗಿದೆ. ಮೀನುಗಾರಿಕೆ, ಹೈನುಗಾರಿಕೆಯಲ್ಲಿ ತೊಡಗಿಕೊಂಡ 2.5 ಕೋಟಿ ರೈತರು ಪ್ರಯೋಜನ ಪಡೆದಿದ್ದಾರೆ ಎಂದು ಶಿವಕುಮಾರ ಉದಾಸಿ ತಿಳಿಸಿದ್ದಾರೆ.
ಕೃಷಿ ಸಮ್ಮಾನ ಯೋಜನೆಯಡಿ ಗದಗ-ಹಾವೇರಿ ಎರಡು ಜಿಲ್ಲೆಗಳಲ್ಲಿ 3.10 ಲಕ್ಷ ಫಲಾನುಭವಿಗಳಿಗೆ 62 ಕೋಟಿ ಹಣ ಜಮೆಗೊಳಿಸಲಾಗಿದೆ. ಜನಧನ ಖಾತೆಯ 4.83 ಲಕ್ಷ ಮಹಿಳಾ ಫಲಾನುಭವಿಗಳಿಗೆ 72.45 ಕೋಟಿ ಹಣ ನೀಡಲಾಗಿದೆ. ಉಜ್ವಲ ಯೋಜನೆಯಡಿ 2.53 ಲಕ್ಷ ಉಚಿತ ಇಂಧನ ಸಿಲಿಂಡರ್ ವಿತರಿಸಲಾಗಿದೆ. ಸಾಮಾಜಿಕ ಭದ್ರತಾ ಪಿಂಚಣಿ ಅಡಿಯಲ್ಲಿ 2.98 ಲಕ್ಷ ಜನರಿಗೆ ಲಾಭ ತಟ್ಟಿದೆ. ಗರೀಬ್ ಕಲ್ಯಾಣ ಯೋಜನೆಯಡಿ 5.97 ಲಕ್ಷ ಕುಟುಂಬಕ್ಕೆ ಉಚಿತ ಪಡಿತರ ಸಿಗುತ್ತಿದೆ ಎಂದು ತಿಳಿಸಿದ್ದಾರೆ.
ಹಾವೇರಿ-ಗದಗ ಜಿಲ್ಲೆಯಲ್ಲಿ ಕಳೆದ ಆರ್ಥಿಕ ವರ್ಷದಲ್ಲಿ ಎನ್ಆರ್ಇಜಿ ಅಡಿ 64 ಲಕ್ಷ ಮಾನವ ದಿನಗಳನ್ನು ಸೃಜಿಸಿ 280 ಕೋಟಿ ರೂ. ವ್ಯಯಿಸಲಾಗಿತ್ತು. ಈಗ ಏ. 1 ರಿಂದ ಜೂ. 16 ತನಕ 28,41191 ಮಾನವ ದಿನಗಳನ್ನು ಸೃಜಿಸಲಾಗಿದೆ. 102 ಕೋಟಿ ರೂ. ಹಣ ವ್ಯಯಿಸಲಾಗಿದೆ ಎಂದು ಶಿವಕುಮಾರ ಉದಾಸಿ ತಿಳಿಸಿದ್ದಾರೆ.
ಅತಿ ಸಣ್ಣ ಆಹಾರ ಸಂಸ್ಕರಣಾ ಘಟಕಗ ಳನ್ನು ನಿಯಮಬದ್ಧಗೊಳಿಸಲು 35,000 ಕೋಟಿ ರೂ. ಹೂಡಿಕೆ, 9 ಲಕ್ಷ ಕುಶಲ, ಅರೆಕುಶಲ ಕೆಲಸ ಗಾರರಿಗೆ ಉದ್ಯೋಗ ಒದಗಿಸುವ ಗುರಿ ಹೊಂದಲಾಗಿದೆ. ಇದಕ್ಕೆ ಪೂರಕವಾಗಿ ಹಾವೇರಿ-ಗದಗ ಜಿಲ್ಲೆಗಳಲ್ಲಿ ಆಹಾರ ಸಂಸ್ಕರಣಾ ಘಟಕಗಳು ತೆರೆದುಕೊಳ್ಳುವ ಆಶಯವಿದೆ.
| ಶಿವಕುಮಾರ ಉದಾಸಿ ಸಂಸದ