ಮಾನ್ವಿ: ಪಟ್ಟಣದ ಜಗನ್ನಾಥ ದಾಸರ ಸನ್ನಿಧಾನಕ್ಕೆ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ರಜತ ರಥ ಮತ್ತು ಪಲ್ಲಕ್ಕಿಯನ್ನು ಸೋಮವಾರ ಸಮರ್ಪಿಸಿದರು.
ಜಗನ್ನಾಥ ದಾಸರ ದೇವಸ್ಥಾನದಲ್ಲಿ ಬೆಳಗ್ಗೆ ಪಂಚಾಮೃತ ಅಭಿಷೇಕ, ರಥಾಂಗಹೋಮ, ಪೂರ್ಣಾಹುತಿ ಹಾಗೂ ಇತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸುಬುಧೇಂದ್ರ ತೀರ್ಥರು ಮೂಲಾರಾಮೋ ದೇವರ ಸಂಸ್ಥಾನ ಪೂಜೆ ನೆರವೇರಿಸಿ ಅನುಗ್ರಹ ಸಂದೇಶ ನೀಡಿದರು. ಸೇವಾಕರ್ತರಿಗೆ ಅನುಗ್ರಹ ಮಂತ್ರಾಕ್ಷತೆ ಹಾಗೂ ಭಕ್ತರಿಗೆ ಮುದ್ರಾಧಾರಣೆ ಮಾಡಿದರು.
ನಂತರ ಮೂಲ ರಾಮದೇವರ ಪೆಟ್ಟಿಗೆಯನ್ನು ರಜತ ಪಲ್ಲಕ್ಕಿಯಲ್ಲಿಟ್ಟು, ಉತ್ಸವ ಮೂರ್ತಿಯನ್ನು ರಜತ ರಥದಲ್ಲಿಟ್ಟು ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಶ್ರೀಗಳು ಚಾಲನೆ ನೀಡಿದರು. ಪ್ರಮುಖರಾದ ಎಚ್.ಡಿ.ಕೃಷ್ಣಮೂರ್ತಿ, ಮನ್ಸಾಲಿ ಯಂಕಯ್ಯಶೆಟ್ಟಿ, ದ್ಯಾಸನೂರು ರಾಘವೇಂದ್ರಶೆಟ್ಟಿ, ದೇವಸ್ಥಾನದ ವ್ಯವಸ್ಥಾಪಕ ಶ್ರೀನಿವಾಸಾಚಾರ್ಯ ಹಾಗೂ ಆರ್ಚಕರು ಇದ್ದರು.