ಮಾನ್ವಿ: ಅಕ್ರಮವಾಗಿ ಪಡಿತರ ಅಕ್ಕಿ ಸಾಗಣೆ ಮಾಡುತ್ತಿದ್ದ ಲಾರಿಯೊಂದು ತಾಲೂಕಿನ ಅಮರೇಶ್ವರ ಕ್ಯಾಂಪ್ ಬಳಿ ಶುಕ್ರವಾರ ಪಲ್ಟಿಯಾಗಿದ್ದು, ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಸ್ಥಳಕ್ಕೆ ಆಗಮಿಸಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು, ಚೆಲ್ಲಾಪಿಲ್ಲಿಯಾಗಿದ್ದ ಅಕ್ಕಿ ಚೀಲಗಳನ್ನು ಬೇರೆ ಲಾರಿಗೆ ಲೋಡ್ ಮಾಡಿಸಿ ಸ್ಥಳೀಯ ಠಾಣೆಗೆ ತಂದು ನಿಲ್ಲಿಸಿದ್ದಾರೆ. ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿ ಯಾರಿಗೆ ಸೇರಿದ್ದೆಂಬ ಮಾಹಿತಿ ತನಿಖೆಯಿಂದ ಹೊರಬರಬೇಕಿದೆ. ಇದು, ಗಂಗಾವತಿಯಿಂದ ರಾಯಚೂರಿಗೆ ಹೊರಟಿತ್ತು. ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.