ಮಾನ್ವಿ: ಬಸವಕಲ್ಯಾಣದಲ್ಲಿ ನಿರ್ಮಾಣಗೊಳ್ಳಲಿರುವ ಅನುಭವ ಮಂಟಪಕ್ಕೆ ಏ.9 ರಂದು ಸಿಎಂ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಬಸವಕಲ್ಯಾಣ ಕ್ಷೇತ್ರ ಸಮಿತಿ ಮತ್ತು ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ಸುಭಾಷಪಾಟೀಲ್ ಹೇಳಿದ್ದಾರೆ.
ಪಟ್ಟಣದ ಕಲ್ಯಾಣ ವೈದ್ಯಾಲಯದಲ್ಲಿ ಶುಕ್ರವಾರ ಬಸವಕಲ್ಯಾಣ ಕ್ಷೇತ್ರ ಸಮಿತಿ ಹಾಗೂ ವಿಕಾಸ ಅಕಾಡೆಮಿ ಜಿಲ್ಲಾ ಘಟಕ ಆಯೋಜಿಸಿದ್ದ ಕರಪತ್ರಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯ ಸರ್ಕಾರ ಬಸವಕಲ್ಯಾಣವನ್ನು ಐತಿಹಾಸಿಕ ಸ್ಥಳವನ್ನಾಗಿ ಮಾಡಲು 600 ಕೋಟಿ ರೂ. ವೆಚ್ಚದಲ್ಲಿ ಅನುಭವ ಮಂಟಪ ಮತ್ತು ಶರಣರ ಸ್ಥಳಗಳನ್ನು ಅಭಿವೃದ್ದಿಪಡಿಸಲು ಮುಂದಾಗಿದೆ. ಅನುಭವ ಮಂಟಪ ನಿರ್ಮಾಣಕ್ಕೆ 300 ಎಕರೆ ಭೂಮಿ ನಿಗದಿ ಮಾಡಲಾಗಿದೆ ಎಂದರು.
ದೇವದುರ್ಗದ ಅರವಿಮನೆ ಬಸವದೇವರು ಮಾತನಾಡಿ, ಬಸವಕಲ್ಯಾಣ ಅಭಿವೃದ್ಧಿ ಸಂತಸ ತಂದಿದೆ. ಸರ್ಕಾರದ ಈ ಕಾರ್ಯಕ್ಕೆ ಬಸವಭಕ್ತರು ಕೈಜೋಡಿಸಬೇಕು ಎಂದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ.ಬಸವಪ್ರಭು ಪಾಟೀಲ್ ಮಾತನಾಡಿದರು. ಬಸವಕೇಂದ್ರದ ಅಧ್ಯಕ್ಷ ನಾಗರಾಜ ಬಳಿಗಾರ, ವೆಂಕಟರಾಯ್ಗೌಡ ದೇವದುರ್ಗ, ಶರಣು ಗಣೇಕಲ್, ಡಿ.ಜಿ. ಕರ್ಕಿಹಳ್ಳಿ, ಉಮೇಶ ಸಜ್ಜನ್, ಸೂಗರೆಡ್ಡಿ, ಶರಣು ಜಾಲಹಳ್ಳಿ, ಶರಣಬಸವ ಬೆಟ್ಟದೂರು, ರಂಗಪ್ಪ ಎಂ. ನೀಲಕಂಠಪ್ಪ, ದೇವೆಂದ್ರ ದುರ್ಗದ್, ಅಮರೇಶ ಗವಿಗಟ್ಟು, ರಾಜು ತಾಳೀಕೊಟೆ ಇನ್ನಿತರರು ಇದ್ದರು.