ಬಂಟ್ವಾಳ: ಜವನೆರೆ ತುಡರ್ ಟ್ರಸ್ಟ್ ಸಿದ್ದಕಟ್ಟೆ ವತಿಯಿಂದ ಎಸ್ಸೆಸ್ಸೆಲ್ಸಿ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಶೈಕ್ಷಣಿಕ, ವೃತ್ತಿ ಮಾರ್ಗದರ್ಶನ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿ ‘ಮಂಥನ-2023’ ರಾಷ್ಟ್ರೀಯ ಶೈಕ್ಷಣಿಕ ಕಾರ್ಯಾಗಾರ ಹಾಗೂ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಸಹಯೋಗದೊಂದಿಗೆ ರಕ್ತದಾನ ಶಿಬಿರ ಜುಲೈ 16ರಂದು ಬೆಳಗ್ಗೆ 8.30ರಿಂದ ಸಿದ್ದಕಟ್ಟೆ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಜರುಗಲಿದೆ.
ಬೆಳಗ್ಗೆ 8.30ರಿಂದ ನೋಂದಣಿ, 9ಕ್ಕೆ ಉದ್ಘಾಟನೆ, ಬಳಿಕ ಮಧ್ಯಾಹ್ನ 12.30ರವರೆಗೆ ರಕ್ತದಾನ ಶಿಬಿರ, 10ರಿಂದ 3.30ರವರೆಗೆ ರಾಷ್ಟ್ರೀಯ ಶೈಕ್ಷಣಿಕ ಕಾರ್ಯಾಗಾರ, 3.30 ಕ್ಕೆ ಸಮಾರೋಪ ನಡೆಯಲಿದೆ. ಕಾಸರಗೋಡು ಪೆರಿಯ ಕೇರಳ ಕೇಂದ್ರಿಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಚೇತನ್ ಮುಂಡಾಜೆ ಸಂಯೋಜಕತ್ವದಲ್ಲಿ 10ರಿಂದ 12.30ರ ವರೆಗೆ ಶೈಕ್ಷಣಿಕ ಕಾರ್ಯಾಗಾರದಲ್ಲಿ ರಾಷ್ಟ್ರೀಯ ತರಬೇತುದಾರ ಅಭಿಜಿತ್ ಕರ್ಕೇರ ‘ಬಲಿಷ್ಠ ಭಾರತ-ಸದೃಢ ವ್ಯಕ್ತಿತ್ವ’ ವಿಷಯದ ಕುರಿತು ಮಾತನಾಡುವರು. 12.30ರಿಂದ 1ರವರೆಗೆ ನಿವೃತ ಶಿಕ್ಷಕ ನಾರಾಯಣ ನಾಯಕ್ ವಿದ್ಯಾರ್ಥಿ ವೇತನದ ಮಾಹಿತಿ ನೀಡುವರು. 1.30ರಿಂದ 2.30ರವರೆಗೆ ಉಡುಪಿಯ ಪೊಲೀಸ್ ಉಪನಿರೀಕ್ಷಕರಾದ ನಿಧಿ ಬಿ.ಎನ್. ‘ಉದ್ಯೋಗಿ ಭಾರತ ವಿದ್ಯಾರ್ಥಿ ಪಥ’ ಕುರಿತು ಉಪನ್ಯಾಸ ನೀಡುವರು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಜರುಗಲಿದೆ. ಪುಣ್ಯಭೂಮಿ ತುಳುನಾಡ ಸೇವಾ ಫೌಂಡೇಶನ್ ಇದರ ಚಂದ್ರಶೇಖರ ಬಿ.ಸಿ ರೋಡ್ ಅವರಿಗೆ ‘ತುಡರ್ ಪುರಸ್ಕಾರ ನೀಡಿ ಗೌರವಿಸಲಾಗುವುದು.