ಬೆಂಗಳೂರು: ಅಸಾನಿ ಚಂಡಮಾರುತ ಬಳಿಕ ರಾಜ್ಯದಲ್ಲಿ ಬಿಟ್ಟೂಬಿಡದೆ ಸುರಿಯುತ್ತಿರುವ ಮಳೆ ಭಾನುವಾರದಿಂದ (ಮೇ 22) ಬಿಡುವು ನೀಡಲಿದೆ. ಆದರೆ, ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಮುಂದಿನ 3-4 ದಿನಗಳಲ್ಲಿ ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದ್ದರೂ ರಾಜ್ಯಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ. ದಕ್ಷಿಣ ಮ್ಯಾನ್ಮರ್ದತ್ತ ಈ ಮಾರುತಗಳು ಸಾಗಲಿವೆ.
ಸದ್ಯ ಹವಾಮಾನ ಪರಿಸ್ಥಿತಿಯನ್ನು ಗಮನಿಸಿದಾಗ ಸೈಕ್ಲೋನ್ ಉಂಟಾಗಲಿದೆ ಎಂದು ತೋರಿಸುತ್ತಿದೆ. ಆದರೆ ಒಂದೆರಡು ದಿನಗಳಲ್ಲಿ ನಿಖರ ಮಾಹಿತಿ ಗೊತ್ತಾಗಲಿದೆ ಎಂದು ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ಹೇಳಿದ್ದಾರೆ.
ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಮೇ 21ರಂದು ಗುಡುಗು ಮಿಂಚು ಸಹಿತ ಮಳೆ ಬೀಳಲಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಿದೆ. ಶುಕ್ರವಾರವೂ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರವಾಗಿ ಮಳೆ ಸುರಿದಿದ್ದು, ಯಾದಗಿರಿಯ ಕವದಿಮಟ್ಟಿಯಲ್ಲಿ 106 ಮಿಮೀ, ಮಲನೂರಿನಲ್ಲಿ 66 ಮಿಮೀ, ಉಡುಪಿಯ ಸಿದ್ದಾಪುರದಲ್ಲಿ 72 ಮಿಮೀ, ಕಲಬುರಗಿಯಲ್ಲಿ 62 ಮಿಮೀ ಹಾಗೂ ಹಾವೇರಿಯ ಹನುಮಾನ್ಮಟ್ಟಿಯಲ್ಲಿ 56 ಮಿಮೀ ಮಳೆ ಬಿದ್ದಿದೆ. ನಿರಂತರ ಮಳೆಯಿಂದ ಗರಿಷ್ಠ ತಾಪಮಾನದಲ್ಲಿ ಗಣನೀಯವಾಗಿ ಇಳಿಕೆಯಾಗಿದೆ.
ಮುಂದಿನ ವಾರದಲ್ಲೇ ಬರುತ್ತಿದೆ ಮಾನ್ಸೂನ್: ಕಾದಿದೆಯಾ ಮತ್ತಷ್ಟು ಅಪಾಯ, ಹವಾಮಾನ ಇಲಾಖೆ ಹೇಳಿದ್ದೇನು?