ಸಿಂಧನೂರು: ಮಣಿಪುರದಲ್ಲಿ ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಬೆತ್ತಲೆ ಮೆರವಣಿಗೆ ನಡೆಸಿರುವುದನ್ನು ಖಂಡಿಸಿ ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ ಸಂಘಟನೆ ತಾಲೂಕು ಸಮಿತಿ ಪ್ರತಿಭಟನೆ ನಡೆಸಿ ತಹಸಿಲ್ ಕಚೇರಿ ಶಿರಸ್ತೇದಾರ್ ಚಂದ್ರಶೇಖರಗೆ ಶುಕ್ರವಾರ ಮನವಿ ಸಲ್ಲಿಸಿತು.
ಮಣಿಪುರದ ಕಾಂಗ್ಪೋಕ್ಪಿ ಜಿಲ್ಲೆಯ ಬಿ ಫೈನೋಮ್ ಗ್ರಾಮದಲ್ಲಿ ಮೇ 4 ರಂದು ಕುಕಿ-ಜೋ ಬುಡಕಟ್ಟು ಸಮುದಾಯದ ಇಬ್ಬರು ಮಹಿಳೆಯರ ಬಟ್ಟೆಯನ್ನು ಬಲವಂತವಾಗಿ ಬಿಚ್ಚಿಸಿ ಜನಸಮೂಹದೊಂದಿಗೆ ಬೆತ್ತಲೆಯಾಗಿ ಮೆರವಣಿಗೆ ಮಾಡಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. ಅಲ್ಲದೇ ಈ ಮಹಿಳೆಯರ ಕುಟುಂಬದ ಇಬ್ಬರು ಸದಸ್ಯರನ್ನು ಹತ್ಯೆ ಮಾಡಲಾಗಿದೆ ಎಂದು ದೂರಿದರು.
ಮಣಿಪುರದಲ್ಲಿ ಮಹಿಳಾ ಹಾಗೂ ಪ್ರಜಾಪ್ರಭುತ್ವ ವಿರೋಧಿ ಅನೇಕ ಘಟನೆಗಳು ನಡೆದಿವೆ. ತುಳಿತಕ್ಕೊಳಗಾದ ಸಮುದಾಯಗಳ ಅವಮಾನದ ಸಾಧನವಾಗಿ ಬಳಸುವ ಈ ನಡತೆಯು ಅಮಾನವೀಯವಾಗಿದೆ. ತಪ್ಪಿತಸ್ಥರನ್ನು ಬಂಧಿಸುವುದರೊಂದಿಗೆ ಮಣಿಪುರದಲ್ಲಿ ಶಾಂತಿ ಮರು ಸ್ಥಾಪಿಸಬೇಕೆಂದು ಒತ್ತಾಯಿಸಲಾಯಿತು. ಪ್ರಮುಖರಾದ ಗಂಗಮ್ಮ, ಎಂ.ಗಂಗಾಧರ, ಮಾಬುಸಾಬ ಬೆಳ್ಳಟ್ಟಿ, ಎಚ್.ಆರ್.ಹೊಸಮನಿ, ಮುದಿಯಪ್ಪ, ಹಸೇನ್ಸಾಬ್, ದೇವಣ್ಣ, ಹುಲುಗಪ್ಪ ಬಳ್ಳಾರಿ, ಯಮನೂರು ಇತರರು ಇದ್ದರು.