ಬೆಂಗಳೂರು: ಹೈದರಾಬಾದ್-ಬೆಂಗಳೂರು ಹೆದ್ದಾರಿಯಲ್ಲಿ ಜನಪ್ರಿಯ ಗಾಯಕಿ ಮಂಗ್ಲಿ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೆ ತುತ್ತಾಗಿದೆ. ಕಾರಿನಲ್ಲಿದ್ದ ಮೂವರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ. ಈ ಸುದ್ದಿ ವೈರಲ್ ಆಗುತ್ತಿದ್ದ ಬೆನ್ನಲ್ಲೆ ಮಂಗ್ಲಿ ಅವರು ಸೋಶಿಯಲ್ ಮೀಡಿಯಾ ಮೂಲಕವಾಗಿ ಸ್ಪಷ್ಟನೆ ನೀಡಿದ್ದಾರೆ.
ರಂಗಾರೆಡ್ಡಿ ಜಿಲ್ಲೆಯ ನಂದಿಗಮ ಮಂಡಲದ ಕನ್ಹಾ ಶಾಂತಿ ವನಂನಲ್ಲಿ ನಡೆದ ವಿಶ್ವ ಆಧ್ಯಾತ್ಮಿಕ ಉತ್ಸವದಲ್ಲಿ ಮಂಗ್ಲಿ ಭಾಗವಹಿಸಿದ್ದರು. ಅಲ್ಲಿ ಕಾರ್ಯಕ್ರಮ ಮುಗಿಸಿ ಶನಿವಾರ ರಾತ್ರಿ ಹೈದರಾಬಾದ್-ಬೆಂಗಳೂರು ಹೆದ್ದಾರಿ ಮೂಲಕ ಮನೆಗೆ ತೆರಳಿದರು. ಶಂಶಾಬಾದ್ ಮಂಡಲದ ತೊಂಡುಪಲ್ಲಿ ಸೇತುವೆ ಬಳಿ ಬಂದಾಗ ವೇಗವಾಗಿ ಬಂದ ಕಾರೊಂದು ಮಂಗ್ಲಿ ಅವರ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿತ್ತು ಎಂದು ಸುದ್ದಿಯಾಗಿತ್ತು.
ಈ ಘಟನೆ ಕುರಿತು ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಾಲಕ ಕುಡಿದ ಅಮಲಿನಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಅಪಘಾತದಲ್ಲಿ ಮಂಗ್ಲಿ ಮತ್ತು ಇತರ ಇಬ್ಬರು ಗಾಯಗೊಂಡಿದ್ದಾರೆ. ಕಾರಿನ ಹಿಂಭಾಗಕ್ಕೆ ಹಾನಿಯಾಗಿದೆ. ಇದು ಎರಡು ದಿನಗಳ ಹಿಂದೆ ನಡೆದ ಅಪಘಾತವಾಗಿದ್ದು, ಇಂದು ವೈರಲ್ ಆಗುತ್ತಿದ್ದು, ಮಾಂಗ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹಲವರು ಸುದ್ದಿ ಹಬ್ಬಿಸುತ್ತಿದ್ದಂತೆ ಗಾಯಕಿ ಮಾಂಗ್ಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.
View this post on Instagram
ಸೋಶಿಯಲ್ ಮೀಡಿಯಾದಲ್ಲಿ ಮಂಗ್ಲಿ.. ನಾನು ಚೆನ್ನಾಗಿದ್ದೇನೆ, ಎರಡು ದಿನಗಳ ಹಿಂದೆ ಸಣ್ಣ ಅಪಘಾತವಾಗಿತ್ತು. ದಯವಿಟ್ಟು ವದಂತಿಗಳನ್ನು ನಂಬಬೇಡಿ. ನನಗೆ ಪ್ರೀತಿಯನ್ನು ತೋರಿಸಿದ್ದಕ್ಕಾಗಿ ಧನ್ಯವಾದಗಳು. ಇದರೊಂದಿಗೆ ಮಂಗ್ಲಿ ಪೋಸ್ಟ್ ವೈರಲ್ ಆಗಿದೆ. ಮಂಗ್ಲಿ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಟಿವಿ ನಿರೂಪಕಿಯಾಗಿ ವೃತ್ತಿ ಆರಂಭಿಸಿದ ಮಂಗ್ಲಿ, ತೆಲುಗಿನ ಜನಪದ, ಸಿನಿಮಾ ಗಾಯಕಿ ಮಂಗ್ಲಿಗೆ ಕರ್ನಾಟಕದಲ್ಲಿಯೂ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಕನ್ನಡದ ‘ಕಣ್ಣು ಹೊಡೆಯಾಕ’ ಹಾಡಿನಿಂದ ರಾತ್ರೋ ರಾತ್ರಿ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು ಮಂಗ್ಲಿ. ಆ ಹಾಡಿನ ಬಳಿಕ ಕೆಲವಾರು ಹಾಡುಗಳನ್ನು ಕನ್ನಡದಲ್ಲಿ ಮಂಗ್ಲಿ ಹಾಡಿದ್ದಾರೆ.