ಮಂಗಳೂರು: ಮಂಗಳೂರಿನ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಗರಡಿ ಸಂಭ್ರಮ -150ರ ನಮ್ಮೂರ ಸಂಭ್ರಮ ಅಂಗವಾಗಿ ಸೋಮವಾರ ಗರಡಿ ಕ್ಷೇತ್ರದ ಶ್ರೀ ಬ್ರಹ್ಮಬೈದರ್ಕಳರಿಗೆ ಸಹಸ್ರ ಕುಂಭಾಭಿಷೇಕ ನಡೆಯಲಿದೆ.
ವೇದಮೂರ್ತಿ ಕೆ. ವಾಸುದೇವ ಶಾಂತಿಯವರ ಉಪಸ್ಥಿತಿಯಲ್ಲಿ ಬಿ. ಗಂಗಾಧರ ಶಾಂತಿ ನೇತೃತ್ವದಲ್ಲಿ ನಾರಾಯಣಗುರು ವೈದಿಕ ಸಮಿತಿ ಸಹಭಾಗಿತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು.
ವಿಶೇಷ ಮಹಾಪೂಜೆ: ಬೆಳಗ್ಗೆ 7.30ರಿಂದ ಕಂಕನಾಡಿ ಗರಡಿ ಕ್ಷೇತ್ರದ ಪ್ರಧಾನ ಶಕ್ತಿಗಳಾದ ಶ್ರೀ ಬ್ರಹ್ಮಬೈದರ್ಕಳರಿಗೆ ಸಹಸ್ರ ಕುಂಭಾಭಿಷೇಕ, ಪ್ರಸನ್ನಪೂಜೆ, ಅನ್ನನೈವೇಧ್ಯ ಸೇವೆ, ಬೈದರ್ಕಳರಿಗೆ ದರ್ಶನ ಸೇವೆ, ಪಾಣಿ ತಾಡನ, ಭೂತಬಲಿ, ಪಲ್ಲಪೂಜೆ ನಡೆಯಿತು. ಪ್ರಾತಃಕಾಲ 4.30ರಿಂದ ಗಣಹೋಮ, ಸಹಸ್ರಕಲಶ ಪ್ರಸನ್ನಪೂಜೆ, ಕಲಶಾಭಿಷೇಕ ನಡೆಯಲಿದೆ. 12.30ಕ್ಕೆ ಅನ್ನಸಂತರ್ಪಣೆ, ಸಂಜೆ 4.00ರಿಂದ ನಾಗಮಂಡಲ ಮಂಟಪ ಶುದ್ಧಿಘಿ, ವಾಸ್ತುರಾಕ್ಷೋಘ್ನಘಿ ಹೋಮ, ವಾಸ್ತು ಬಲಿ, ರಾತ್ರಿ 7.00ರಿಂದ ಪಲ್ಲಕ್ಕಿ ಬಲಿ ಉತ್ಸವ, ಬ್ರಹ್ಮಬೈದರ್ಕಳರಿಗೆ ವಿಶೇಷ ಮಹಾಪೂಜೆ ನಡೆಯಲಿದೆ.
ಕನ್ಯಾಡಿ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಮುಂಬಯಿ ಸುವರ್ಣ ಬಾಬಾ ಸ್ವಾಮೀಜಿ, ಶಾಸಕ ವೇದವ್ಯಾಸ ಕಾಮತ್, ಮೇಯರ್ ಜಯಾನಂದ ಅಂಚನ್, ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್, ಕಂಕನಾಡಿ ಗರಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಕೆ., ಗರಡಿ ಸಂಭ್ರಮದ ಅಧ್ಯಕ್ಷ ಮೋಹನ್ ಉಜ್ಜೋಡಿ, ಮ್ಯಾನೇಜರ್ ಜೆ. ಕಿಶೋರ್, ಗರಡಿ ಕ್ಷೇತ್ರದ ಮೊಕ್ತೇಸರರಾದ ಬಿ.ವಿಠಲ, ಎ. ವಾಮನ, ಬಿ. ದಾಮೋದರ ನಿಸರ್ಗ, ದಿವರಾಜ್, ಜಗದೀಪ್ ಡಿ. ಸುವರ್ಣ, ದಿನೇಶ್ ಅಂಚನ್, ಜೆ. ವಿಜಯ, ಕಾರ್ಪೊರೇಟರ್ಗಳಾದ ಪ್ರವೀಣ್ಚಂದ್ರ ಆಳ್ವ, ಸಂದೀಪ್ ಗರಡಿ, ಅನಿಲ್ ಪೂಜಾರಿ, ಆರ್ಥಿಕ ಸಮಿತಿ ಮುಖ್ಯಸ್ಥ ಶರಣ್ ಪಂಪ್ವೆಲ್ ಉಪಸ್ಥಿತರಿದ್ದರು.
ಇಂದಿನ ಸಾಂಸ್ಕೃತಿಕ ಕಾರ್ಯಕ್ರಮ: ಸಂಜೆ 4 ರಿಂದ ಶ್ರೀ ದೇವಿ ನೃತ್ಯಾರಾಧನಾ ಕಲಾ ಕೇಂದ್ರ ಮಂಗಳೂರು ಇವರ ತಂಡದಿಂದ ನೃತ್ಯ ರೂಪಕ, ರಾತ್ರಿ 9.00ರಿಂದ ಜರ್ನಿ ಥಿಯೇಟರ್ ಮಂಗಳೂರು ಇವರಿಂದ ರಂಗ–ಗೀತೆ ವೈವಿಧ್ಯ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಇಂದು ನಾಗಬ್ರಹ್ಮ ಮಂಡಲೋತ್ಸವ ಸೇವೆ
ಪ್ರಾತಃಕಾಲ 4.30ರಿಂದ ಗಣಹೋಮ, ನಾಗದೇವರಿಗೆ ವಿಶೇಷ ಪಂಚಾಮೃತ ಅಭಿಷೇಕ, ತನುತಂಬಿಲ ಸೇವೆ, ಆಶ್ಲೇಷ ಬಲಿ, ಸರ್ಪಸೂಕ್ತ ಹೋಮ, ಮಂಡಲ ಪೂಜೆ, ರಾತ್ರಿ 9.00ರಿಂದ ನಾಗಪಾತ್ರಿ ಶ್ರೀ ಮನೋಜ್ ಶಾಂತಿ ಮತ್ತು ಬಳಗದವರಿಂದ ನಾಗ ಸಾನಿಧ್ಯದಲ್ಲಿ ಹಾಲಿಟ್ಟು ಸೇವೆ, ರಾತ್ರಿ 12.00ರಿಂದ ನಾಗಬ್ರಹ್ಮ ಮಂಡಲೋತ್ಸವ ಸೇವೆ ನಡೆಯಲಿದೆ.