ಬೆಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಬಿಗಿ ಭದ್ರತೆ ಮಾಡಲಾಗಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಭದ್ರತೆ ಹೆಚ್ಚಿಸಲಾಗಿದೆ. ಕಳೆದ ಒಂದು ವಾರದಿಂದಲೂ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಭದ್ರತೆ ಹೆಚ್ಚಿಸಲಾಗಿತ್ತು. ಮಂಗಳೂರು ಘಟನೆ ಬಳಿಕ ಮತ್ತಷ್ಟು ಮುತುವರ್ಜಿ ವಹಿಸಿದ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಗಣರಾಜ್ಯೋತ್ಸವ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಭದ್ರತೆಗೆ ಒತ್ತು ನೀಡಲಾಗಿದೆ.
ಸಿಐಎಸ್ಎಫ್ನಿಂದ ವಿಮಾನ ನಿಲ್ದಾಣಕ್ಕೂ ಭದ್ರತೆ ಹೆಚ್ಚಿಸಲಾಗಿದೆ. ರೈಲ್ವೆ ಪೊಲೀಸರು ಬೆಂಗಳೂರು ನಗರ ಪೊಲೀಸರಿಗೆ ಅಲರ್ಟ್ ಮಾಡಿದ್ದಾರೆ, ಸೂಕ್ಣ್ಮ ಪ್ರದೇಶಗಳಲ್ಲಿ ಹದ್ದಿನ ಕಣ್ಣಿಡುವಂತೆ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲು ನಗರ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.
ಅಂತರಿಕಾ ಭದ್ರತಾ ವಿಭಾಗ ಮತ್ತು ನಗರ ಪೊಲೀಸರಿಂದ ನಗರದಾದ್ಯಂತ ಭದ್ರತೆ ಒದಗಿಸಲು ಸೂಚಿಸಲಾಗಿದೆ ಎಂದು ದಿಗ್ವಿಜಯ ನ್ಯೂಸ್ಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಕೇವಲ ಐದು ದಿನದಲ್ಲಿ ಗಣರಾಜ್ಯೋತ್ಸವ ಇದೆ. ಇದರ ಬೆನ್ನಲ್ಲೆ ಮಂಗಳೂರಲ್ಲಿ ಬಾಂಬ್ ಪತ್ತೆಯಾಗಿರುವುದು ಅಂತಕದ ವಿಷಯ. ಈ ಹಿನ್ನೆಲ್ಲೆಯಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಕಂಡಲ್ಲಿ ತಪಾಸಣೆ ನಡೆಸಲಾಗುವುದು. ಇನ್ನು ಐದು ದಿನದ ಬಳಿಕ ಗಣರಾಜ್ಯೋತ್ಸವ ನಡೆಯಲಿದೆ. ಇಂತಹ ಸಮಯದಲ್ಲಿ ದುಷ್ಕೃತ್ಯ ಎಸಗಲು ಸಂಚು ರೂಪಿಸಿರುವ ಸಾಧ್ಯತೆ ಇರುವುದರಿಂದ ಎಚ್ಚರ ವಹಿಸಲು ನಗರದ ಎಲ್ಲ
ಡಿಸಿಪಿಗಳಿಗೂ ಪೊಲೀಸ್ ಆಯುಕ್ತರು ಮೌಖಿಕ ಆದೇಶ ನೀಡಿದ್ದಾರೆ.
ತಮ್ಮ ತಮ್ಮ ವಿಭಾಗಗಳ ಎಲ್ಲ ಪ್ರಮುಖ ಸ್ಥಳಗಳು, ಧಾರ್ಮಿಕ ಮಂದಿರಗಳು ಮತ್ತು ಬಸ್/ಮೆಟ್ರೋ ನಿಲ್ದಾಣಗಳ ಮೇಲೆ ತೀವ್ರ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.
ಪ್ರತಿ ವಿಭಾಗದ ಇನ್ಸ್ಪೆಕ್ಟರ್ ಹಾಗೂ ಎಸಿಪಿಗಳ ಜತೆ ಡಿಸಿಪಿ ತುರ್ತು ಸಭೆ ನಡೆಸಿದ್ದು ಅಗತ್ಯ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಬಂದೋಬಸ್ತ್ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. (ದಿಗ್ವಿಜಯ ನ್ಯೂಸ್)