ಬೆಂಗಳೂರು: ಅಪಾರ್ಟ್ಮೆಂಟ್ ಒಂದನ್ನು ತೆಗೆದುಕೊಂಡು ಜೀವನ ನಡೆಸುತ್ತಿದ್ದ ಕಾರ್ತಿಕ್(42) ಹೆಸರಿನ ವ್ಯಕ್ತಿಯ ಕೊಲೆಯ ರಹಸ್ಯ ಇದೀಗ ಬಯಲಾಗಿದೆ. ಒಂದೇ ಒಂದು ವಾಟ್ಸ್ಆ್ಯಪ್ ಸ್ಟೇಟಸ್ನಿಂದಾದ ಕೊಲೆಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ರಾಜಗೋಪಾಲ್ ನಗರದ ಜಿಕೆಡಬ್ಯೂ ಲೇಔಟ್ನಲ್ಲಿ ಜೂನ್ 16ರಂದು ಕಾರ್ತಿಕ್ನ ಕೊಲೆಯಾಗಿತ್ತು. ಈ ಸಂಬಂಧ ರಾಜಗೋಪಾಲನಗರ ಠಾಣೆ ಪೊಲೀಸರು ಮೋಹನ್(32) ಮತ್ತು ನಾಗರಾಜು(36) ಹೆಸರಿನ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಾರ್ತಿಕ್ ಅಪಾರ್ಟ್ಮೆಂಟ್ ಒಂದರಲ್ಲಿ ಎರಡು ಫ್ಲಾಟ್ಗಳನ್ನು 61 ಲಕ್ಷ ರೂಪಾಯಿಗೆ ಖರೀದಿಸಿದ್ದ. ಅದರ ಅಗ್ರಿಮೆಂಟ್ ಕೂಡ ಆಗಿತ್ತು. ಆದರೆ ಕೇವಲ 40 ಲಕ್ಷ ರೂಪಾಯಿ ಕೊಟ್ಟಿದ್ದ ಕಾರ್ತಿಕ್ ಉಳಿದ 21 ಲಕ್ಷ ಹಣ ಕೊಡದೇ ಸತಾಯಿಸುತ್ತಿದ್ದ. ಅಲ್ಲದೇ ಎರಡು ಫ್ಲಾಟ್ ಮಧ್ಯೆ ಗೋಡೆ ಒಡೆದು ಒಂದೇ ಫ್ಲಾಟ್ ಮಾಡಿಕೊಂಡಿದ್ದ. ಇದರಿಂದ ಕಟ್ಟಡಕ್ಕೆ ತೊಂದರೆ ಆಗತ್ತೆ ಎಂದು ಅನೇಕರು ಹೇಳಿದ್ದರು. ಆದರೂ ಆತ ಕೇರ್ ಮಾಡಿರಲಿಲ್ಲ. ಕಾರ್ತಿಕ್ ವಿರುದ್ಧ ಆತನ ಅಪಾರ್ಟ್ಮೆಂಟ್ ನಿವಾಸಿಗಳು ಹಲವು ಬಾರಿ ಠಾಣೆಗೆ ದೂರು ನೀಡಿದ್ದರು.
ಅಪಾರ್ಟ್ಮೆಂಟ್ನ ಮಾಲೀಕ ಫ್ಲಾಟ್ ನಿರ್ವಹಣೆ ಜವಾಬ್ದಾರಿಯನ್ನು ಆರೋಪಿ ಮೋಹನ್ಗೆ ವಹಿಸಿದ್ದರು. ಹಾಗೆಯೇ ಮಾಲೀಕನ ಹಲವು ವ್ಯವಹಾರವನ್ನು ಮೋಹನ್ಗೆ ವಹಿಸಲಾಗಿತ್ತು. ಆದರೆ ಮೋಹನ್ ಏನೇ ವ್ಯವಹಾರ ಮಾಡಿದರೂ ಕಾರ್ತಿಕ್ ಅದರಲ್ಲಿ ಅಡ್ಡಗಾಲು ಹಾಕುತ್ತಿದ್ದ. ಮೋಹನ್ ಮೇಲಿದ್ದ ಸಿಟ್ಟಿನಿಂದಾಗಿ, ಅಪಾರ್ಟ್ಮೆಂಟ್ ಮಾಲೀಕನ ಮಗಳಿಗೂ ಮೋಹನ್ಗೂ ಅಕ್ರಮ ಸಂಬಂಧ ಇದೆ ಎಂದು ಕಾರ್ತಿಕ್ ವಾಟ್ಸ್ಆ್ಯಪ್ ಸ್ಟೇಟಸ್ ಹಾಕಿದ್ದ. ಇದರಿಂದ ಕೋಪಗೊಂಡ ಮೋಹನ್ ಕೊಲೆಗೆ ಪ್ಲಾನ್ ಮಾಡಿದ್ದಾನೆ. ಜೂನ್ 15ರ ರಾತ್ರಿ ಕೆಲಸ ನಿಮಿತ್ತ ಹೊರಹೋಗಿದ್ದ ಕಾರ್ತಿಕ್, ಬೈಕ್ನಲ್ಲಿ ಅಪಾರ್ಟ್ಮೆಂಟ್ಗೆ ಬರುತ್ತಿದ್ದಾಗ ಅಡ್ಡಗಟ್ಟಿ ಹಲ್ಲೆ ಮಾಡಿ ತಲೆಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದರು.
ಈ ಪ್ರಕರಣವನ್ನು ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗಿತ್ತು. ವಿಚಾರಣೆ ನಡೆಸಿರುವ ಪೊಲೀಸರು ಮೋಹನ್ ಹಾಗೂ ಇನ್ನೋರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಕೋವಿಶೀಲ್ಡ್ ಕೊಟ್ಟ 5 ನಿಮಿಷಗಳೊಳಗೆ ಕೊವ್ಯಾಕ್ಸಿನ್! ಇಬ್ಬರು ನರ್ಸ್ಗಳು ಸೇರಿ ಮಾಡಿದ ಅವಾಂತರ…
ನದಿ ದಾಟಲು ಯತ್ನಿಸಿ ಕೊಚ್ಚಿ ಹೋದ ಈ ಯುವಕ ಬಚಾವ್ ಆಗಿದ್ದು ಹೇಗೆ ನೋಡಿ!
ಗಂಡನೊಂದಿಗೆ ಫೋನ್ನಲ್ಲಿ ಮಾತನಾಡುತ್ತಾ ಹೊರಹೋದವಳು ದೂರದ ರೈಲ್ವೆ ಹಳಿ ಬಳಿ ಮಾಂಸವಾಗಿ ಪತ್ತೆ!