ಕಡಲೂರು: ಪರಿಸರ ಕಾರ್ಯಕರ್ತನೊಬ್ಬ ಸುಪ್ತ ಸ್ಥಿತಿಯಲ್ಲಿದ್ದ ಬಿದ್ದಿದ್ದ ನಾಗರಹಾವಿಗೆ ನೀರು ಕುಡಿಸಿ ಹೃದಯಸ್ಪರ್ಶಿ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯ ತಿರುಚೋಪರೂರಿನಲ್ಲಿ ನಡೆದಿದೆ.
ಗ್ರಾಮದ ನಟರಾಜನ್ ಎಂಬುವರು ತಮ್ಮ ಮನೆಯ ಸಮೀಪ ಸುಪ್ತ ಸ್ಥಿತಿಯಲ್ಲಿದ್ದ ನಾಗರಹಾವನ್ನು ಕಂಡು ಕೂಡಲೇ ತನ್ನ ಸ್ನೇಹಿತನ ಮುಖಾತಂರ ಪರಿಸರ ಕಾರ್ಯಕರ್ತ ಚೆಲ್ಲಾ ಎಂಬುವರನ್ನು ಸಂಪರ್ಕಿಸಿದ್ದಾರೆ. ಕೂಡಲೇ ಚೆಲ್ಲಾ, ನಟರಾಜನ್ನ ಮನೆಗೆ ಬಂದು ಹಾವನ್ನು ಸತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಪೆನ್ಡ್ರೈವ್ ಹಿಡಿದು ವಿಧಾನಸೌಧಕ್ಕೆ ಎಚ್ಡಿಕೆ ಎಂಟ್ರಿ: ಸ್ಫೋಟಗೊಳ್ಳುತ್ತಾ ಸಚಿವರೊಬ್ಬರ ಲಂಚದ ಆಡಿಯೋ?
ನಂತರ ಹಾವು ತೀವ್ರ ನಿರ್ಜಲೀಕರಣದಿಂದ ಬಳಲುತ್ತಿದೆ ಎಂಬುದನ್ನು ಅರಿತ ಚೆಲ್ಲಾ, ನಾಗರಹಾವಿನ ಬಾಲವನ್ನು ಹಿಡಿದು ಪ್ಲಾಸ್ಟಿಕ್ ಬಾಟಲಿಯಿಂದ ಹಾವಿನ ಬಾಯಿಯ ಹತ್ತಿರ ನೀರು ಸುರಿಯಲು ಪ್ರಾರಂಭಿಸಿದ್ದಾರೆ. ಹಾವು ಈ ವೇಳೆ ಪ್ರತಿಕ್ರಿಯೆ ನೀಡಿದ್ದು, ಹಾವು ನೀರು ಕುಡಿದು ನಿಧಾನವಾಗಿ ಚೇತರಿಸಿಕೊಂಡು ಕ್ರಮೇಣ ತನ್ನ ಶಕ್ತಿಯನ್ನು ಮರಳಿ ಪಡೆದಿದೆ. ಕೊನೆಗೆ ಚೆಲ್ಲಾ ಹಾವನ್ನು ಹಿಡಿದು ಸಮೀಪದ ಕಾಡಿನಲ್ಲಿ ಬಿಟ್ಟು ಬಂದಿದ್ದಾರೆ.
ಇನ್ನು ಚೆಲ್ಲಾ, ನಾಗರ ಹಾವು ವಿಷವನ್ನು ಸೇವಿಸಿದ ಇಲಿಯನ್ನು ಸೇವಿಸಿರಬಹುದು. ಇದರ ಪರಿಣಾಮವಾಗಿ ಅದು ನಿರ್ಜಲೀಕರಣಗೊಂಡು ಪ್ರಜ್ಞೆ ತಪ್ಪಿದೆ ಎಂದು ತಿಳಿಸಿದ್ದಾರೆ. ನಾಗರಹಾವಿನ ಜೀವ ಉಳಿಸುವ ಪ್ರಯತ್ನವನ್ನು ಸೆರೆಹಿಡಿಯುವ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.(ಏಜೆನ್ಸೀಸ್)