ಕೋಲ್ಕತ: ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತದಲ್ಲಿ ಆಯೋಜಿಸಲಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಸಮಾವೇಶಕ್ಕೆ ವ್ಯಕ್ತಿಯೊಬ್ಬ ಪರವಾನಗಿ ಹೊಂದಿದ್ದ ಗನ್ ತೆಗೆದುಕೊಂಡು ಒಳಪ್ರವೇಶಿಸಲು ಯತ್ನಿಸಿದ್ದ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ವ್ಯಕ್ತಿಯನ್ನು ಸ್ವಯಂಸೇವಕರು ಹಾಗೂ ಪೊಲೀಸರು ತಡೆದು ವಾಪಸ್ ಕಳುಹಿಸಿದರು ಎಂದು ತಿಳಿದುಬಂದಿದೆ. ವ್ಯಕ್ತಿಯನ್ನು ದುರ್ಗಾಪುರದ ಮಾಜಿ ಸಿಎಪಿಎಫ್ ಸಿಬ್ಬಂದಿ ಜಡು ನ್ಯಾಂಡಿ ಎಂದು ಗುರುತಿಸಲಾಗಿದ್ದು, ಈ ವೇಳೆ ತಾನೂಬ್ಬ ಬಿಜೆಪಿ ಬೆಂಬಲಿಗ ಎಂದು ಹೇಳಿಕೊಂಡಿದ್ದಾನೆ.
ಸಮಾವೇಶ ಸ್ಥಳದಲ್ಲಿನ ವಿಐಪಿ ಪ್ರವೇಶ ದ್ವಾರದ ಮೂಲಕ ಪ್ರವೇಶಿಸಲು ಯತ್ನಿಸಿದ್ದಾನೆ. ರಕ್ಷಣಾತ್ಮಕ ಕಾರಣಗಳಿಂದ ಗನ್ ತಂದಿದ್ದ ಎಂದು ತಿಳಿದುಬಂದಿದೆ.
ಅಮಿತ್ ಷಾ ಅವರು ಪಶ್ಚಿಮ ಬಂಗಾಳ ಪ್ರವಾಸ ಕೈಗೊಂಡಿದ್ದು, ಇಂದು ಕೋಲ್ಕತಗೆ ಬಂದಿಳಿದಿದ್ದಾರೆ. ಕೋಲ್ಕತ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಬಿಜೆಪಿ ನಾಯಕರು ಬರಮಾಡಿಕೊಂಡರು. ಮೊದಲು ರಾಜರ್ಹತ್ನಲ್ಲಿನ ರಾಷ್ಟ್ರೀಯ ಭದ್ರತಾ ಸಿಬ್ಬಂದಿ(ಎನ್ಎಸ್ಜಿ)ಯ 29 ವಿಶೇಷ ಸಂಯೋಜಿತ ಗುಂಪು ಸಂಕೀರ್ಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಮಿತ್ ಷಾ ಭಾಗವಹಿಸಿದರು. ಬಳಿಕ ಸಿಎಎ ಪರ ನಡೆದ ಸಮಾವೇಶದಲ್ಲಿ ಪಾಲ್ಗೊಂಡರು. ಇದಕ್ಕೂ ಮುನ್ನ ಸಿಎಎ ವಿರೋಧಿ ಪ್ರತಿಭಟಕಾರರು ಅಮಿತ್ ಷಾ ವಿರುದ್ಧ ಗೋ ಬ್ಯಾಕ್ ಘೋಷಣೆ ಕೂಗಿದರು. (ಏಜೆನ್ಸೀಸ್)