ಇಂಡಿ: ರಿಪಬ್ಲಿಕನ್ ಪಾರ್ಟಿ ಆಪ್ ಇಂಡಿಯಾ (ಅಂಬೇಡ್ಕರ) ಘಟಕದ ತಾಲೂಕು ಘಟಕದ ಸದಸ್ಯರು ಹಾಗೂ ಸಾರ್ವಜನಿಕರು ಇಂಡಿ ಜಿಲ್ಲೆ ಹಾಗೂ 371 (ಜೆ)ಗೆ ಸೇರ್ಪಡೆಗೊಳಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ಚಂದ್ರಶೇಖರ ಮೇಲಿನಮನಿ ಮಾತನಾಡಿ, ಇಂಡಿ ತಾಲೂಕು ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಭಾಗದ ಹಿಂದುಳಿದ ಪ್ರದೇಶಗಳಲ್ಲೊಂದಾಗಿದೆ. ಇಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಇನ್ನು ಪ್ರಗತಿ ಕಾಣಬೇಕಾಗಿದೆ. ಆಡಳಿತಾತ್ಮಕ ದೃಷ್ಟಿಯಿಂದ ಇಂಡಿ ಪ್ರತ್ಯೇಕ ಜಿಲ್ಲೆಯ ರಚನೆಗೆ ಸಂಬಂಧಿಸಿದಂತೆ ಜಿಲ್ಲೆಗೆ ಬೇಕಾಗಿರುವ ಪೂರಕ ಅಂಶಗಳು ಸಾಕಷ್ಟಿವೆ. ಅದರಂತೆ ಹಲವಾರು ವರ್ಷಗಳಿಂದ ಅಭಿವೃದ್ಧಿ ಕಾಣದೆ ತೀರ ಹಿಂದುಳಿದ ಗಡಿ ಭಾಗವಾಗಿದ್ದು, ಇಲ್ಲಿ ಪದವಿ ಕಾಲೇಜುಗಳು, ತಾಂತ್ರಿಕ ಇಂಜಿನಿಯರಿಂಗ್, ಡಿಪ್ಲೋಮಾ ಕಾಲೇಜುಗಳು, ಪ್ಯಾರಾ ಮೆಡಿಕಲ್, ನರ್ಸಿಂಗ್ ಕಾಲೇಜು ಹಾಗೂ ಸ್ನಾತಕೊತರ ಕಾಲೇಜುಗಳ ಸ್ಥಾಪನೆಯಾಗಬೇಕಿದೆ. ಗಡಿನಾಡು ಅಭಿವೃದ್ಧಿಗಾಗಿ ಇಂಡಿಯನ್ನು ಪ್ರತ್ಯೇಕ ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡಬೇಕು ಎಂದರು.
ಪ್ರತಿಭಟನೆಯಲ್ಲಿ ರಾಮಚಂದ್ರ ಕಾಂಬಳೆ, ವಿಶ್ವನಾಥ ವಾಘ್ಮೋರೆ, ಸುರೇಶ ಕಾಂಬಳೆ, ಪರಶುರಾಮ ಭಾವಿಕಟ್ಟಿ, ವಿಕಾಸ ಗುಡಮಿ, ಎಸ್.ಬಿ. ಹರಿಜನ, ಪರಶುರಾಮ ಉಕ್ಕಲಿ, ಬಿ. ವೆಂಕಟೇಶ ಮತ್ತಿತರಿದ್ದರು.