ಉಡುಪಿ: ದ್ವೈತ ಸಿದ್ಧಾಂತ ಪ್ರತಿಪಾದಕ ಆಚಾರ್ಯ ಮಧ್ವರು ಅದೃಶ್ಯರಾಗಿರುವ ದಿನದ ಅಂಗವಾಗಿ ಸೋಮವಾರ ಕೃಷ್ಣ ಮಠ, ಅನಂತೇಶ್ವರ, ಪಾಜಕ ಸಹಿತ ವಿವಿಧೆಡೆ ಶ್ರದ್ಧಾಭಕ್ತಿಯಿಂದ ಮಧ್ವ ನವಮಿ ಆಚರಿಸಲಾಯಿತು.
ಅನಂತೇಶ್ವರ ದೇವಸ್ಥಾನದಲ್ಲಿ ಆಚಾರ್ಯ ಮಧ್ವರು ಅದೃಶ್ಯರಾದ ಸ್ಥಳದಲ್ಲಿ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ವಿಶೇಷ ಪೂಜೆಯನ್ನು ನೆರವೇರಿಸಿದರು. ಕೃಷ್ಣ ಮಠದಲ್ಲಿ ಮಧ್ವವಿಜಯ ಪಾರಾಯಣ, ವಾಯುಸ್ತುತಿ ಹೋಮ ಜರಗಿತು. ಅನಂತೇಶ್ವರ ದೇವಳ ಮತ್ತು ಕೃಷ್ಣ ಮಠದಲ್ಲಿ ಭಕ್ತರಿಗೆ ವಿಶೇಷ ಅನ್ನಸಂತರ್ಪಣೆ ನಡೆಯಿತು. ಸಾಯಂಕಾಲ ರಥಬೀದಿಯಲ್ಲಿ ಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯ ಪಲಿಮಾರು ಮಠದ ಹೃಷಿಕೇಶ ತೀರ್ಥ ಬರೆದಿಟ್ಟಿರುವ ಸರ್ವಮೂಲ ಗ್ರಂಥದ ಮೂಲಹಸ್ತಪ್ರತಿಗಳನ್ನು ಸುವರ್ಣ ರಥದಲ್ಲಿಟ್ಟು ಮೆರವಣಿಗೆ ನಡೆಸಲಾಯಿತು. ಪರ್ಯಾಯ ಅದಮಾರು ಮಠಾಧೀಶ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ, ಪಲಿಮಾರು ಹಿರಿಯ ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಹಾಗೂ ಕಿರಿಯ ಮಠಾಧೀಶ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.
ಮಧ್ಯವಾಟ ಮಠ, ಪಾಜಕದಲ್ಲಿ ಪೂಜೆ: ಮಧ್ವ ನವಮಿ ಪ್ರಯುಕ್ತ ಮಧ್ವಾಚಾರ್ಯರು ಪ್ರತಿನಿತ್ಯ ಸುಬ್ರಹ್ಮಣ್ಯಕ್ಕೆ ತೆರಳುವ ಸಂದರ್ಭದಲ್ಲಿ ಮಧ್ಯಾಹ್ನ ಪೂಜೆ ಮಾಡುತ್ತಿದ್ದ ಮಧ್ಯ ವಾಟ ಮಠದಲ್ಲಿ ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಮಧ್ವಾಚಾರ್ಯ ಕರಾರ್ಚಿತ ವೇದವ್ಯಾಸ (ವ್ಯಾಸಮುಷ್ಟಿ) ದೇವರಿಗೆ, ಭಾ ವಿಸಮೀರ ವಾದಿರಾಜರಿಂದ ಪ್ರತಿಷ್ಠಿತ ಮುಖ್ಯಪ್ರಾಣ ದೇವರಿಗೆ ಹಾಗೂ ಭೂತರಾಜರಿಗೆ ವಿಶೇಷ ಪೂಜೆ ನಡೆಸಿದರು. ಮಧ್ವಾಚಾಯ ರರ್ ಜನ್ಮಸ್ಥಳ ಪಾಜಕದಲ್ಲಿ ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿಗಳು ಸಂಪನ್ನಗೊಂಡವು.