ಮದ್ದೂರು: ತಾಲೂಕಿನ ಗೆಜ್ಜಲಗೆರೆ ಗ್ರಾಮದ ಮನ್ಮುಲ್ ಮುಂದೆ ವಾಸಿಸುತ್ತಿರುವ ನಿವಾಸಿಗಳಿಗೆ ಸೂಕ್ತ ರಸ್ತೆ ಕಲ್ಪಿಸಬೇಕೆಂದು ಎಂದು ಆಗ್ರಹಿಸಿ ಗೆಜ್ಜಲಗೆರೆ ಹಾಗೂ ಬಸವನಪುರ ಗ್ರಾಮಸ್ಥರು ಗುರುವಾರ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಗ್ರಾಮದ ಮುಖಂಡ ವೈರಮುಡಿ ಮಾತನಾಡಿ, ಗೆಜ್ಜಲಗೆರೆ ಗ್ರಾಮದ ಮನ್ಮುಲ್ ಮುಂಭಾಗ ರಸ್ತೆ ಇಲ್ಲದ ಕಾರಣ ಸಂಚಾರಕ್ಕೆ ತೊಂದರೆಯಾಗಿದೆ. ಇಲ್ಲಿ 35-40 ವರ್ಷಗಳಿಂದ ಹಲವಾರು ಕುಟುಂಬಗಳು ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿವೆ. ಆದರೆ ರಸ್ತೆ ಇಲ್ಲದ ಕಾರಣ ನಾಗರಿಕರು ಸಂಚರಿಸಲು ತೊಂದರೆಯಾಗಿದೆ. ಆಂಬುಲೆನ್ಸ್ ಕೂಡ ಬರಲು ಸಾಧ್ಯವಿಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೆಜ್ಜಲಗೆರೆ ಗ್ರಾಮ ಪಂಚಾಯಿತಿಯ ಪಿಡಿಒ ವೆಂಕಟಯ್ಯ ಮಾತನಾಡಿ, ಈಗಾಗಲೇ ರಸ್ತೆ ಕಲ್ಪಿಸುವ ಉದ್ದೇಶದಿಂದ ಭೂಸ್ವಾಧೀನ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಭೂಮಿ ಖರೀದಿಸಬೇಕಿದೆ. ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಭೂಮಿ ಖರೀದಿ ಮಾಡಬೇಕಿದ್ದು, ಈ ಹಿಂದೆ ಕರೆದಿದ್ದ ಸಭೆ ರದ್ದಾಗಿದೆ. ಮುಂದೆ ಸಭೆ ಕರೆದು ಭೂಸ್ವಾಧೀನ ಮಾಡಲು ಜಿಲ್ಲಾಧಿಕಾರಿ ದರ ನಿಗದಿಪಡಿಸಲಿದ್ದಾರೆ ಎಂದು ತಿಳಿಸಿದರು. ಬಳಿಕ ಪ್ರತಿಭಟನೆ ಅಂತ್ಯಗೊಂಡಿತು.
ಪ್ರತಿಭಟನೆಯಲ್ಲಿ ಮುಖಂಡರಾದೆ ಕೆ.ಎಸ್. ಶಿವಲಿಂಗಯ್ಯ, ವೈರಮುಡಿ, ಸತ್ಯ, ರತ್ನಮ್ಮ, ವಿಜಯ, ಸುಧಾ, ಸುನಂದಾ, ಜಯಲಕ್ಷ್ಮೀ, ಜಯಮ್ಮ, ಭಾಗ್ಯಾ, ರತ್ನಮ್ಮ, ಸೌಮ್ಯಾ, ಮಂಗಳಾ, ಬೋರಮ್ಮ, ರಾಜಮ್ಮ, ಕುಮಾರಿ ಇತರರಿದ್ದರು.