ಮಾಡೋದಕ್ಕೆ ನೂರಾರು ಕೆಲಸವಿರುತ್ತವೆ. ಆದರೆ ಅದನ್ನು ಆಸಕ್ತಿ ಇಟ್ಟು ಮಾಡುವ ಶಕ್ತಿ ಇರುವುದು ಕೆಲವರಲ್ಲಿ ಮಾತ್ರ. ಯಾಂತ್ರಿಕ ಬದುಕಿನ ಹೊರಗೆ ನಿಂತು ವಿಭಿನ್ನ ರೀತಿಯಲ್ಲಿ ಆಲೋಚಿಸಿ, ಕಾರ್ಯರೂಪಕ್ಕೆ ತರುವವರು ಅನೇಕರಿದ್ದಾರೆ. ನನ್ನ ಭಾಷೆ, ನನ್ನ ರಾಜ್ಯ, ನಮ್ಮ ಜನ, ನಮ್ಮ ಕಲೆ ಎಂಬ ಅಭಿಮಾನ ಇಟ್ಟುಕೊಂಡು ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಕೆಲ ಯುವ ಸಾಧಕರ ಕಿರು ಪರಿಚಯ ಇಲ್ಲಿದೆ. ಇದರಲ್ಲಿ ಕೆಲವರು ಅದನ್ನೇ ತಮ್ಮ ವೃತ್ತಿಯನ್ನಾಗಿಯೂ ಮಾಡಿಕೊಂಡು ಕೈತುಂಬ ಕಾಸನ್ನೂ ಗಳಿಸುತ್ತಿದ್ದಾರೆ.
ಮರೆಯಾಗುತ್ತಿರುವ ಸಾಂಪ್ರದಾಯಿಕ ಕಲೆಗಳಲ್ಲಿ ಮಂಡಲ ಕಲೆಯೂ ಒಂದು. ಆದರೆ ಅಲ್ಲಲ್ಲಿ ಕೆಲವರು ಈ ಕಲೆಯನ್ನು ಮತ್ತೆ ಮುನ್ನೆಲೆಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಅಂಥವರಲ್ಲಿ ಒಬ್ಬರು ಸಾಗರ ಮೂಲದ ಬೆಂಗಳೂರು ನಿವಾಸಿ ಸೌಮ್ಯ ಬೀನಾ. ಸಂಬಂಧಿಯೊಬ್ಬರ ಗೃಹಪ್ರವೇಶಕ್ಕೆ ನೇಮ್ಪ್ಲೇಟ್ ಮಾಡಿಸುವ ಸಲುವಾಗಿ ಆರಂಭವಾದ ಮಂಡಲ ಕಲಿಕೆ ಇಂದು ಒಂದು ಬಿಜಿನೆಸ್ ರೂಪ ತಾಳಿದೆ. ಕಣ್ಣು ಮತ್ತು ಕೈ ಎರಡೂ ಒಂದೇ ತೆರನಾಗಿ ಯೋಚಿಸಿ, ಏಕಾಗ್ರತೆಯಿಂದ ಕುಳಿತು ಬರೆದರೆ ಮಾತ್ರವೇ ಮಂಡಲವಾಗುತ್ತದೆ. 3 ವರ್ಷಗಳಿಂದ ಪ್ರತಿದಿನ ನನಗೆ ಕಲಿಕೆಯೇ ಜೀವನವಾಗಿದೆ ಎನ್ನುತ್ತಾರೆ ಸೌಮ್ಯ.
ಸೌಮ್ಯ ಅವರ ಕಲೆಗೆ ವೇದಿಕೆ ಒದಗಿಸಿದ್ದು ಸಾಮಾಜಿಕ ಜಾಲತಾಣ. ಕಲಿಕೆಯ ಅವಧಿಯಿಂದಲೂ ಕಲೆಯನ್ನು ಫೇಸ್ಬುಕ್ನಲ್ಲೇ ಪ್ರದರ್ಶಿಸಲು ಆರಂಭಿಸಿದ್ದರು. ನಂತರ ಅವರಿಗೆ ಅವರದ್ದೇ ಗೆಳೆಯರ ಬಳಗದಿಂದ ಬೇಡಿಕೆಗಳು ಬರಲಾರಂಭಿಸಿದವು. ಗಡಿಯಾರ, ಕಾಫಿ ಕಪ್, ಕ್ಯಾಲೆಂಡರ್ ಹೀಗೆ ನಾನಾ ತರಹದ ಸಾಮಗ್ರಿಗಳ ಮೇಲೆಯೂ ಮಂಡಲ ಚಿತ್ರಗಳನ್ನು ಬರೆಯಲಾರಂಭಿಸಿದರು. ಕರೊನಾ ಸಮಯದಲ್ಲಿ ಸಮಗ್ರ ಕರ್ನಾಟಕವನ್ನೇ ಕ್ಯಾಲೆಂಡರ್ನ ಥೀಮ್ ಆಗಿಟ್ಟುಕೊಂಡು ಹಂಪಿ ವೈಭವ, ಭೂತಕೋಲ ಸೇರಿ ವೈವಿಧ್ಯತೆ ಸಾರುವ ಅನೇಕ ಮಂಡಲಗಳನ್ನು ಕ್ಯಾಲೆಂಡರ್ ಮೇಲೆ ಮೂಡಿಸಿದರು. ಅದಕ್ಕೆ ಭಾರಿ ಬೇಡಿಕೆ ವ್ಯಕ್ತವಾಯಿತು.
ಕಳೆದ ಎರಡು ವರ್ಷಗಳಿಂದ ಚಿತ್ರಕಲಾ ಪರಿಷತ್ನ ಚಿತ್ರಸಂತೆಯಲ್ಲೂ ಭಾಗವಹಿಸಿ ತಮ್ಮ ಕಲಾಕೃತಿಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡುತ್ತಿದ್ದಾರೆ. 15ಕ್ಕೂ ಹೆಚ್ಚು ವರ್ಕ್ಶಾಪ್ಗಳನ್ನು ಮಾಡಿ, ನೂರಾರು ಮಕ್ಕಳು ಮತ್ತು ಮಹಿಳೆಯರಿಗೆ ಮಂಡಲ ಕಲೆಯನ್ನು ಹೇಳಿಕೊಟ್ಟಿದ್ದಾರೆ. ನಡೆ ಕನ್ನಡ, ನುಡಿ ಕನ್ನಡ, ಸ್ವಚ್ಛ ಭಾರತ, ಸಾಂಪ್ರದಾಯಿಕ ಭಾರತ ಎನ್ನುವ ಆದರ್ಶಗಳನ್ನು ಹೊಂದಿರುವ ಸೌಮ್ಯ ಇದೀಗ ಹವ್ಯಾಸವಾಗಿಯೂ ವೃತ್ತಿಯಾಗಿಯೂ ಮಂಡಲ ಕಲೆಯನ್ನು ಸ್ವೀಕರಿಸಿದ್ದಾರೆ.
– ಮಂದಾರ ಸಾಗರ