ನವದೆಹಲಿ: ದೇಶದಾದ್ಯಂತ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ದಿನೇದಿನೆ ಭಾರೀ ಪ್ರಮಾಣದ ಏರಿಕೆ ಕಾಣುತ್ತಿದೆ. ನವದೆಹಲಿ ಸೇರಿ ಅನೇಕ ರಾಜ್ಯಗಳಲ್ಲಿ ಆಕ್ಸಿಜನ್ ಕೊರತೆ ಕಂಡುಬಂದಿದ್ದು, ಈ ವಿಚಾರವಾಗಿ ದೆಹಲಿ ಹೈ ಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ದೆಹಲಿಯ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಉಂಟಾಗಿರುವ ಕುರಿತಾಗಿ ಮ್ಯಾಕ್ಸ್ ಗ್ರೂಪ್ ಹೈ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ಮಾಡಿದ ನ್ಯಾಯಾಲಯ ಕೇಂದ್ರವನ್ನು ಪ್ರಶ್ನಿಸಿದೆ. ದೇಶದ ಎಲ್ಲ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆ ಮಾಡುವುದು ಕೇಂದ್ರ ಸರ್ಕಾರದ ಕರ್ತವ್ಯ. ಹೀಗಿರುವಾಗ ಸರ್ಕಾರ ಇಷ್ಟೊಂದು ಅಸಡ್ಡೆ ಏಕಾಗಿ ತೋರಿಸುತ್ತಿದೆ? ಜನರ ಜೀವದ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ ಎನ್ನುವುದನ್ನು ಇದು ತೋರಿಸುತ್ತದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
ಇಂಟಸ್ಟ್ರಿಗಳ ಆಕ್ಸಿಜನ್ ಬಳಕೆ ಮಾಡಿಕೊಳ್ಳುವ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ನ್ಯಾಯಾಲಯ ಈಗಾಗಲೇ ಸರ್ಕಾರಕ್ಕೆ ಸೂಚಿಸಿದೆ. ಆ ಬಗ್ಗೆ ಏನು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಇಂದು ಪ್ರಶ್ನಿಸಲಾಗಿದೆ. ಪೇಪರ್ ವರ್ಕ್ ನಡೆಸುತ್ತಿರುವುದಾಗಿ ಸರ್ಕಾರ ತಿಳಿಸಿದ್ದು, ಅದಕ್ಕೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಎಲ್ಲ ಇಂಡಸ್ಟ್ರಿಗಳು ಸಹಾಯ ಹಸ್ತ ಚಾಚಲು ಸಿದ್ಧಯಿವೆ. ನಿಮ್ಮದೇ ಸರ್ಕಾರವಿರುವ ರಾಜ್ಯಗಳಲ್ಲಿ ಪೆಟ್ರೋಲಿಯಂ ಸಂಸ್ಥೆಗಳಿವೆ. ಹಾಗಿದ್ದರೂ ಆಕ್ಸಿಜನ್ ಪಡೆಯಲು ಇಷ್ಟು ಸಮಯ ಬೇಕೇ? ಎಂದು ನ್ಯಾಯಾಲಯ ಕೇಳಿದೆ.
ಪ್ರತಿಯೊಬ್ಬ ಮನುಷ್ಯನಿಗೆ ಆಕ್ಸಿಜನ್ ನೀಡುವುದು ಸರ್ಕಾರದ ಕೆಲಸ. ಹಾಗೆ ಮಾಡದಿದ್ದರೆ ಮನುಷ್ಯನ ಜೀವಿಸುವ ಹಕ್ಕನ್ನು ಕಸಿದುಕೊಂಡಂತಾಗುತ್ತದೆ. ಎಲ್ಲ ಇಂಡಸ್ಟ್ರಿಗಳಿಂದ ಸಂಪೂರ್ಣವಾಗಿ ಆಕ್ಸಿಜನ್ ಪಡೆದಾದರೂ ಜನರ ಜೀವ ರಕ್ಷಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಲಾಗಿದೆ. (ಏಜೆನ್ಸೀಸ್)