ನವದೆಹಲಿ: ಸದ್ಯ ಅಸ್ಥಿತ್ವದಲ್ಲಿರುವ ಕಾನೂನಿನ ಅಡಿಯಲ್ಲಿ “ಲವ್ ಜಿಹಾದ್” ಎಂಬ ಪದವನ್ನು ಎಲ್ಲೂ ವ್ಯಾಖ್ಯಾನಿಸಿಲ್ಲ ಹಾಗೂ ಕೇಂದ್ರೀಯ ಏಜೆನ್ಸಿಗಳಿಂದ ಈ ಸಂಬಂಧ ಈವರೆಗೂ ಯಾವುದೇ ವರದಿಯಾಗಿಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ಸಂಸತ್ತಿನಲ್ಲಿ ತಿಳಿಸಿದೆ.
ಹಿಂದು ಮತ್ತು ಮುಸ್ಲಿಂ ನಡುವಿನ ಸಂಬಂಧವನ್ನು ಉಲ್ಲೇಖಿಸಿ, ಬಲವಂತವಾಗಿ ಮಹಿಳೆಯರನ್ನು ಮತಾಂತರ ಮಾಡಲಾಗುತ್ತದೆ ಎಂಬುದನ್ನು “ಲವ್ ಜಿಹಾದ್” ಎಂಬ ಪದದಿಂದ ಬಲಪಂಥೀಯರು ಸಾಕಷ್ಟು ಬಾರಿ ಇದನ್ನು ಪ್ರಯೋಗ ಮಾಡುತ್ತಿರುತ್ತಾರೆ.
ಈ ಬಗ್ಗೆ ಮಾತನಾಡಿರುವ ಕೇಂದ್ರ ಗೃಹಸಚಿವಾಲಯದ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ, ಸಂವಿಧಾನದ ಆರ್ಟಿಕಲ್ 25 ಅನ್ನು ಉಲ್ಲೇಖಿಸಿ, ಧಾರ್ಮಿಕ ವಿಚಾರಧಾರೆಗಳನ್ನು ಬಹಿರಂಗವಾಗಿ ಒಪ್ಪಿಕೊಳ್ಳುವುದು, ಆಚರಿಸುವುದು ಮತ್ತು ಪ್ರಸಾರ ಮಾಡುವ ಸ್ವಾತಂತ್ರ್ಯವನ್ನು ಇದರ ಅಡಿಯಲ್ಲಿ ಒದಗಿಸಲಾಗಿದೆ ಎಂದು ತಿಳಿಸಿದರು.
ಕಾನೂನು ಮಟ್ಟಿಗೆ ಲವ್ ಜಿಹಾದ್ ಪದವನ್ನು ವ್ಯಾಖ್ಯಾನಿಸಿಲ್ಲ. ಅಂತಹ ಯಾವುದೇ ಪ್ರಕರಣಗಳು ಈವರೆಗೂ ಕೇಂದ್ರೀಯ ತನಿಖಾ ಸಂಸ್ಥೆಗಳಿಂದ ವರದಿಯಾಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಕೃಷ್ಣನ್ ರೆಡ್ಡಿ ಉತ್ತರಿಸಿದರು. ಆದಾಗ್ಯೂ ಪರಸ್ಪರ ನಂಬಿಕೆ ಮೇಲೆ ನಡೆದಿರುವ ಎರಡು ಮದುವೆ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ದಳ ನಡೆಸುತ್ತಿರುವುದಾಗಿ ಮಾಹಿತಿ ನೀಡಿದರು.
ಯಾವುದೇ ಕೇಂದ್ರೀಯ ಸಂಸ್ಥೆಯು ಕೇರಳದಲ್ಲಿ ಕಳೆದ ಎರಡು ವರ್ಷದಲ್ಲಿ ನಡೆದಿರುವ ಲವ್ ಜಿಹಾದ್ ಪ್ರಕರಣಗಳನ್ನು ವರದಿ ಮಾಡಿವೆಯೇ ಎಂದು ಕೇರಳದ ಕಾಂಗ್ರೆಸ್ ನಾಯಕ ಬೆನ್ನೆ ಬೆಹನಾನ್ ಕೇಳಿದ್ದ ಪ್ರಶ್ನೆಗೆ ಗೃಹ ಸಚಿವಾಲಯ ಇಂದು ಸಂಸತ್ತಿನಲ್ಲಿ ಉತ್ತರ ನೀಡಿತು. (ಏಜೆನ್ಸೀಸ್)