ಚಿಕ್ಕಬಳ್ಳಾಪುರ: ಬಾಗೇಪಲ್ಲಿ ತಾಲೂಕು ಯಗವ ಮದ್ದಲಖಾನೆಯಲ್ಲಿ ಹರೀಶ್ ಮತ್ತು ಸಿರೀಶಾ ಲವ್ ಸ್ಟೋರಿ ದುರಂತ ಅಂತ್ಯ ಕಂಡಿದ್ದರೂ ಪಾಲಕರ ಕೋಪಾಗ್ನಿ ಉರಿಯುತ್ತಲೇ ಇದೆ. ನಿನ್ನೆರಾತ್ರಿ ಪ್ರೇಯಸಿಯ ತಂದೆಯಿಂದಲೇ ಚಾಕು ಇರಿತಕ್ಕೊಳಗಾಗಿ ಪ್ರಿಯಕರ ಮೃತಪಟ್ಟ ಬೆನ್ನಲ್ಲೇ ದುಷ್ಕರ್ಮಿಗಳು ಯುವತಿಯ ಮನೆಗೆ ಬೆಂಕಿ ಹಚ್ಚಿದ್ದಾರೆ.
ಒಂದೇ ಗ್ರಾಮದ ಸಿರೀಶಾ ಹಾಗೂ ಹರೀಶ್ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ವಿವಾಹಕ್ಕೆ ಯುವತಿಯ ಪೋಷಕರು ಒಪ್ಪಿಗೆ ನೀಡಿರಲಿಲ್ಲ. ಹಾಗಾಗಿ ಈ ಪ್ರಕರಣ ವರ್ಷದ ಹಿಂದೆ ಬಾಗೇಪಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಎರಡೂ ಕುಟುಂಬಕ್ಕೂ ಪೊಲೀಸರು ಬುದ್ಧಿಮಾತು ಹೇಳಿ ಕಳಿಸಿದ್ದರು. ಇಷ್ಟಾದರೂ ಯುವತಿ ಪಾಲಕರು ಮದುವೆಗೆ ಒಪ್ಪಿರಲಿಲ್ಲ. ಇದೇ ಕಾರಣಕ್ಕೆ ಮನನೊಂದ ಸಿರೀಶಾ ಕಳೆದ ವರ್ಷ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಳು.
ಇದನ್ನೂ ಓದಿರಿ ತೋಟದ ಮನೆಯಲ್ಲಿ ಸೆಕ್ಸ್ ಮಾಡುತ್ತಿರುವಾಗಲೇ ಮಹಿಳೆ ಮತ್ತು ಯುವಕನನ್ನು ಬರ್ಬರವಾಗಿ ಕೊಚ್ಚಿ ಹಾಕಿದ ಅಜ್ಜ-ಮೊಮ್ಮಗ!
ಸಿರೀಶಾಳ ಪ್ರಿಯಕರ ಹರೀಶ್(25) ನನ್ನು ನಿನ್ನೆ ರಾತ್ರಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಮಗಳು ಸಿರೀಶಾಳ ಆತ್ಮಹತ್ಯೆ ಸೇಡಿಗೆ ವರ್ಷದಿಂದ ಕಾದ ತಂದೆ ವೆಂಕಟೇಶ್ ಮತ್ತು ಸಂಬಂಧಿ ಗಣೇಶ್ ಇಬ್ಬರು ಜತೆಯಾಗಿ ಹರೀಶ್ನನ್ನು ಕೊಂದಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಇವರಿಬ್ಬರನ್ನೂ ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದಾರೆ.
ಮಗನ ಸಾವಿಂದ ಕಂಗೆಟ್ಟ ಹರೀಶ್ ಸಂಬಂಧಿಕರು ಇಂದು ವೆಂಕಟೇಶ್(ಸಿರೀಶಾಳ ತಂದೆ) ಮನೆ ಮುಂದೆ ಗಲಾಟೆ ಮಾಡಿ ಬಾಗಿಲು ಹಾಗೂ ಕಿಟಕಿಯ ಗಾಜುಗಳನ್ನು ಹೊಡೆದು ಆಕ್ರೋಶ ಹೊರಹಾಕಿದ್ದರು.
ಇದಾದ ಬಳಿಕ ಕೊಲೆ ಆರೋಪಿ ವೆಂಕಟೇಶ್ ಮನೆಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಲಾಗಿದೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಹರೀಶ್ ಕುಟುಂಬಸ್ಥರೇ ಮನೆಗೆ ಬೆಂಕಿ ಹಚ್ಚಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಸ್ಥಳ ಪರಿಶೀಲನೆ ನಡೆಸಿದರು. ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಒಟ್ಟಿನಲ್ಲಿ ಒಂದು ಪ್ರೇಮಕಥೆಯ ನಾಯಕ-ನಾಯಕಿ ದುರಂತ ಅಂತ್ಯಕಂಡರೂ ಎರಡೂ ಕುಟುಂಬಗಳ ದ್ವೇಷದ ಜ್ವಾಲೆ ಹೊತ್ತಿ ಉರಿಯುತ್ತಲೇ ಇದೆ.
ಸುದ್ದಿಗಾಗಿ ಕೊಲೆ ಆರೋಪಿ ಮನೆಗೆ ಬೆಂಕಿ ಹಚ್ಚಿಸಿದ್ದ ವರದಿಗಾರ ಅರೆಸ್ಟ್!