ಬೆಂಗಳೂರು : ಮೈಸೂರು ರಸ್ತೆ ನಾಯಂಡನಹಳ್ಳಿ ಜಂಕ್ಷನ್ನಲ್ಲಿ ಚಾಲಕನನ್ನು ಅಪಹರಣ ಮಾಡಿ, ಪಾನ್ ಮಸಾಲ ಕ್ಯಾಂಟರ್ ಲಾರಿ ಕಳವು ಮಾಡಿದ್ದ ದರೋಡೆಕೋರರು, ಕಾಟನ್ಪೇಟೆ ಸಮೀಪ ಬಿಟ್ಟು ಹೋಗಿದ್ದಾರೆ. ಚಂದ್ರ ಲೇಔಟ್ ಪೊಲೀಸರು ಕ್ಯಾಂಟರ್ಅನ್ನು ಪತ್ತೆ ಮಾಡಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಮೇ 20 ರ ಬೆಳಗ್ಗೆ ವಿಲ್ಸನ್ ಗಾರ್ಡನ್ನಲ್ಲಿರುವ ಗೋದಾಮಿನಲ್ಲಿ 48 ಲಕ್ಷ ರೂ. ಮೌಲ್ಯದ ಆರ್ಎಂಡಿ ಪಾನ್ ಮಸಾಲವನ್ನು ತುಂಬಿಕೊಂಡು ಚಾಲಕ ಸತೀಶ್ ಸಿಂದಗಿಗೆ ಹೊರಟ್ಟಿದ್ದರು. ಲಗ್ಗೆರೆಯಲ್ಲಿ ಮತ್ತೊಬ್ಬ ಚಾಲಕನನ್ನು ಹತ್ತಿಸಿಕೊಳ್ಳುವ ಸಲುವಾಗಿ ಬೆಳಗ್ಗೆ 8.30ರಲ್ಲಿ ಮೈಸೂರು ರಸ್ತೆ ನಾಯಂಡಹಳ್ಳಿ ಜಂಕ್ಷನ್ನಲ್ಲಿ ಬಲ ತಿರುವು ಪಡೆಯುತ್ತಿದ್ದರು. ಆಗ ಅಲ್ಲಿಗೆ ಆಟೋದಲ್ಲಿ ಬಂದ ದುಷ್ಕರ್ಮಿಗಳು ಕ್ಯಾಂಟರ್ ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ಆಟೋಗೆ ಡಿಕ್ಕಿ ಹೊಡೆದುಕೊಂಡು ಬಂದಿದ್ದೀಯ ಎಂದು ಚಾಲಕನನ್ನು ಕೆಳಗೆಳೆದು ಆಟೋದಲ್ಲಿ ಕೂರಿಸಿಕೊಂಡು ಅಪರಹಣ ಮಾಡಿದ್ದಾರೆ.
ಇದನ್ನೂ ಓದಿ: ಎಚ್ಚರಿಕೆ ! ಸತ್ತವರ ಬಟ್ಟೆಯನ್ನೂ ಕದಿಯುವವರಿದ್ದಾರೆ !
ಸ್ವಲ್ಪ ದೂರ ಹೋಗುತ್ತಿದಂತೆ ಚಾಲಕ ಸತೀಶ್ ತಪ್ಪಿಸಿಕೊಂಡು ಸಾರ್ವಜನಿಕರ ಸಹಾಯದಿಂದ ಲಗ್ಗೆರೆಯಲ್ಲಿದ್ದ ಮತ್ತೊಬ್ಬ ಚಾಲಕನಿಗೆ ಕರೆ ಮಾಡಿ, ಆತನ ಜೊತೆ ನಾಯಂಡಹಳ್ಳಿ ಜಂಕ್ಷನ್ಗೆ ಬಂದಿದ್ದಾರೆ. ಆದರೆ, ಅಲ್ಲಿ ಕ್ಯಾಂಟರ್ ಇರಲಿಲ್ಲ. ಕೊನೆಗೆ ಮಾಲೀಕರನ್ನು ಸಂಪರ್ಕ ಮಾಡಿ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತನಿಖೆ ಆರಂಭಿಸಿದ ಇನ್ಸ್ಪೆಕ್ಟರ್ ಬ್ರಿಜೇಶ್ ಮ್ಯಾಥ್ಯೂ ನೇತೃತ್ವದ ತಂಡ ಎಲ್ಲೆಡೆ ಹುಡುಕಾಟ ನಡೆಸುತ್ತಿದ್ದಾಗ ಕಾಟನ್ಪೇಟೆ ಸಮೀಪ ಕ್ಯಾಂಟರ್ ಪತ್ತೆಯಾಗಿದೆ. ಕ್ಯಾಂಟರ್ ಮತ್ತು ಅದರಲ್ಲಿದ್ದ ಸರಕು ಸೇರಿ ಒಟ್ಟು 51 ಲಕ್ಷ ರೂ, ಮೌಲ್ಯದ ವಸ್ತುಗಳು ನಷ್ಟವಾಗುವುದನ್ನು ಪೊಲೀಸರು ತಪ್ಪಿಸಿದ್ದಾರೆ. ಆದರೆ ಇನ್ನೂ ಆರೋಪಿಗಳ ಪತ್ತೆಯಾಗಿಲ್ಲ. ಕೆಲವು ಮಾಹಿತಿಗಳು ಲಭ್ಯವಾಗಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
VIDEO | ತುಂಬಿ ತುಳುಕಿದ ಶಾರದಾ ನದಿ; ನೀರಿನಲ್ಲಿ ಸಿಲುಕಿದ್ದ 9 ಜನರ ರಕ್ಷಣೆ