ತುಮಕೂರು: ರಾಜ್ಯದಲ್ಲಿ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸುವುದು ಮುಂದುವರಿದಿದ್ದು, ಇಂದು ಕೆಐಡಿಬಿ ಅಧಿಕಾರಿಯೊಬ್ಬರ ಮನೆಯನ್ನು ಜಾಲಾಡಿದ್ದಾರೆ. ವಿಶೇಷವೆಂದರೆ 15 ಗಂಟೆಗಳಿಂದ ನಡೆಯುತ್ತಿರುವ ಪರಿಶೀಲನೆ ಇನ್ನೂ ಮುಗಿದಿಲ್ಲ.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಅಧಿಕಾರಿ ಸಿ.ಎನ್.ಮೂರ್ತಿ ಎಂಬವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸತತ 15 ಗಂಟೆಗಳಿಂದ ಪರಿಶೀಲನೆ ನಡೆಸಿದರೂ ಮುಗಿಯದಿರುವುದು ಅಚ್ಚರಿ ಮೂಡಿಸಿದೆ. ಇಂದು ಬೆಳಗ್ಗೆ 6 ಗಂಟೆಗೇ ದಾಳಿ ನಡೆದಿದ್ದು, ಸತತ ಪರಿಶೀಲನೆ ನಡೆಯುತ್ತಿದೆ.
ಇದನ್ನೂ ಓದಿ: ಪೊಲೀಸರು ಸಾರ್ವಜನಿಕರ ಜತೆ ಕಡೇಪಕ್ಷ ಸಭ್ಯತೆಯಿಂದ ವರ್ತಿಸಿ: ಪೊಲೀಸರಿಗೆ ಎಡಿಜಿಪಿ ಪರೋಕ್ಷ ಎಚ್ಚರಿಕೆ
ತುಮಕೂರಿನ ಆರ್.ಟಿ.ನಗರದಲ್ಲಿರುವ ಸಿ.ಎನ್ ಮೂರ್ತಿ ಮನೆಯಲ್ಲಿ 15 ಮಂದಿ ಲೋಕಾಯುಕ್ತ ಅಧಿಕಾರಿಗಳು ನಿರಂತರ ಪರಿಶೀಲನೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಎಸ್ಪಿ ವಲೀಂ ಬಾಷಾ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ತುಮಕೂರು, ಬೆಂಗಳೂರು ಸೇರಿದಂತೆ ಹಲವೆಡೆ ಆಸ್ತಿ ಇರುವ ಮಹತ್ವದ ದಾಖಲೆಗಳು ಲಭ್ಯವಾಗಿವೆ.
ತುಮಕೂರು ಸೇರಿದಂತೆ 8 ಕಡೆ ಇರುವ ನಿವೇಶನ, ಒಂದು ವಾಸದ ಮನೆಯ ದಾಖಲೆಗಳ ಸಹಿತ 1 ಕೆ.ಜಿ.ಗೂ ಅಧಿಕ ಚಿನ್ನಾಭರಣ ಹಾಗೂ 8 ಲಕ್ಷ ರೂ. ನಗದು ಕೂಡ ಪತ್ತೆಯಾಗಿದೆ. ಲೋಕಾಯುಕ್ತ ಅಧಿಕಾರಿಗಳು ಇಲ್ಲಿ ಇಂದು ರಾತ್ರಿ ಇಡೀ ಶೋಧಕಾರ್ಯ ಮುಂದುವರಿಸಲಿದ್ದಾರೆ ಎನ್ನಲಾಗಿದೆ.
ಗಂಡ-ಹೆಂಡತಿ ಮಾತುಕತೆಯ ಎಲ್ಲವನ್ನೂ ಹೊರಗೆ ಹೇಳೋಕಾಗಲ್ಲ: ಡಿ.ಕೆ.ಶಿವಕುಮಾರ್ ಭೇಟಿ ಬಳಿಕ ಸವದಿ ಹೀಗಂದಿದ್ಯಾಕೆ?