ದೇವದುರ್ಗ : ಲಾಕ್ಡೌನ್ನಲ್ಲಿ ಸಮಯ ಕಳೆಯಲು ಜನರು ನಾನಾ ತಂತ್ರ ಅನುಸರಿಸುತ್ತಿದ್ದರೆ, ತಾಲೂಕಿನ ಗಲಗ ಗ್ರಾಮದ ಪ್ರಜ್ಞಾವಂತ ಯುವಕರು ವಿವಿಧ ಸಮಾಜಮುಖಿ ಕೆಲಸ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಇವರ ತಂಡದಲ್ಲಿ ವೈದ್ಯರು, ಇಂಜಿನಿಯರ್, ವಕೀಲರು, ಪೊಲೀಸ್, ಶಿಕ್ಷಕರು ಸೇರಿ ವಿವಿಧ ಉದ್ಯೋಗ ಮಾಡುವ 20ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಈ ತಂಡ ವಾರದಿಂದ ಗ್ರಾಮದ 2 ಐತಿಹಾಸಿಕ ಬಾವಿಗಳನ್ನು ಸ್ವಚ್ಛ ಮಾಡಿದೆ. ಸುಮಾರು 20 ಸಾವಿರ ರೂ. ಖರ್ಚು ಮಾಡಿ ವಿವಿಧ ರೀತಿಯ ಸಮಾಜ ಸೇವೆ ಮಾಡುತ್ತಿದೆ. ಇಲ್ಲಿನ ಚನ್ನಬಸವೇಶ್ವರ ಮಠದಲ್ಲಿರುವ ಐತಿಹಾಸಿಕ ಸಿದ್ದಯ್ಯ ತಾತನ ಬಾವಿ ಹಾಗೂ ಊರ ಹೊರಗಡೆಯ ಸಿಹಿ ನೀರಿನ ಬಾವಿ ಸ್ವಚ್ಛ ಮಾಡಿದ್ದಾರೆ.
2 ಪಂಪ್ಸೆಟ್ನಿಂದ ನೀರು ಸಂಪೂರ್ಣ ಹೊರತೆಗೆದು, 4 ದಿನ ಹೂಳು ತೆಗೆದು ಬ್ಲೀಚಿಂಗ್ ಪೌಡರ್ ಸಿಂಪಡಿಸಿದ್ದಾರೆ. ಸಿಹಿ ನೀರಿನ ಬಾವಿ (ಗಿರಿಕಿ ಮಾದರಿ) ಅತ್ಯಂತ ಆಳವಾಗಿದ್ದು, ಇಲ್ಲಿ ಗಾಳಿ, ಬೆಳಕಿನ ಕೊರತೆ ಇದೆ. ನೂರಾರು ಅಡಿ ಹಾಳಕ್ಕೆ ಇಳಿದು ಹೂಳು ತೆಗೆದು ಸ್ವಚ್ಛ ಮಾಡಿದ್ದಾರೆ. ಸದ್ಯ ಗ್ರಾಮಸ್ಥರು ಈ ಬಾವಿ ನೀರು ಕುಡಿಯಲು ಬಳಸುತ್ತಾರೆ ಎಂದು ಮಾಹಿತಿ ನೀಡುತ್ತಾರೆ ಯುವಕರಾದ ಹನುಮಗೌಡ ವಕೀಲ, ಜಗದೀಶ, ಚನ್ನಬಸವ, ನರಸಣ್ಣ ನಾಯಕ.
ಕೆಲ ದಿನಗಳ ಹಿಂದೆ ಪೂರ್ತಿ ಗ್ರಾಮ ಸ್ವಚ್ಛಗೊಳಿಸಿದ ಯುವಕರು, ಚರಂಡಿಗೆ ಇಳಿದು ಹೂಳು ತೆಗೆದು, ಬಾರಿಗೆ ಹಿಡಿದು ಕಸ ಗುಡಿಸಿದ್ದರು. 80 ಮೀಟರ್ ಬಟ್ಟೆಯಲ್ಲಿ 1500ಕ್ಕೂ ಹೆಚ್ಚು ಮಾಸ್ಕ್ಗಳನ್ನು ಖುದ್ದಾಗಿ ಹೊಲೆದು, ಮನೆಮನೆಗೂ ವಿತರಿಸಿ, ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.