ಚೆನ್ನೈ: ಆತ ಮನೆ ಮಾಲೀಕ. ಹೆಸರು ಗುಣಶೇಖರ್ (52), ಈತ ಬಾಡಿಗೆದಾರ. ಹೆಸರು ಅಜಿತ್ (26). ಇಲ್ಲಿಯ ಕುಂದ್ರಾಥುರ್ ಪ್ರದೇಶದಲ್ಲಿ ನಿವೃತ್ತ ಬ್ಯಾಂಕ್ ಉದ್ಯೋಗಿ ಗುಣಶೇಖರ್ ನನ್ನು ಅಜಿತ್ ಇರಿದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ನೀರಿನ ಟ್ಯಾಂಕ್ ಲಾರಿ ಕ್ಲೀನರ್ ಆಗಿ ಕೆಲಸ ಮಾಡುತ್ತಿರುವ ಅಜಿತ್ ಆರು ತಿಂಗಳ ಹಿಂದೆ ಗುಣಶೇಖರ್ ಒಡೆತನದ ಮನೆಯಲ್ಲಿ ವಾಸಿಸುತ್ತಿದ್ದ. ತಿಂಗಳಿಗೆ 4000 ರೂ. ಬಾಡಿಗೆ ಕಟ್ಟುತ್ತಿದ್ದ. ಆದರೆ COVID-19 ಲಾಕ್ಡೌನ್ನಿಂದಾಗಿ ನಾಲ್ಕು ತಿಂಗಳಿಂದ ಮನೆ ಬಾಡಿಗೆ ಹಾಗೂ ವಿದ್ಯುತ್ ಬಿಲ್ ಪಾವತಿಸಲು ಅಜಿತ್ಗೆ ಸಾಧ್ಯವಾಗಲಿಲ್ಲ.
ಇದನ್ನೂ ಓದಿ: 10, 12 ನೇ ತರಗತಿ ಪರೀಕ್ಷಾ ಫಲಿತಾಂಶ ದಿನಾಂಕ ಕುರಿತ ವದಂತಿ ನಂಬಬೇಡಿ ಎಂದ ಸಿಬಿಎಸ್ಇ
ಅದೇ ಮನೆಯ ಪ್ರತ್ಯೇಕ ಭಾಗದಲ್ಲಿ ವಾಸಿಸುವ ಗುಣಶೇಖರ್, ಈ ತಿಂಗಳು ಅಜಿತ್ ಮತ್ತು ಅವರ ಕುಟುಂಬ ಸದಸ್ಯರಿಗೆ ಬಾಡಿಗೆ ಹಣಕ್ಕಾಗಿ ಒತ್ತಾಯಿಸುತ್ತಿದ್ದರು. ಪ್ರಕರಣದ ತನಿಖಾಧಿಕಾರಿಯ ಪ್ರಕಾರ, ಅಜಿತ್ನ ತಾಯಿಯೊಂದಿಗೆ ವಾದ ಮಾಡುವಾಗ ಗುಣಶೇಖರ್ ಅವಾಚ್ಯ ಶಬ್ದಗಳನ್ನಾಡಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಬುಧವಾರ ರಾತ್ರಿ ಮನೆಗೆ ಮರಳಿದ ನಂತರ ಈ ಘಟನೆಯ ಬಗ್ಗೆ ಕೇಳಿದ ಅಜಿತ್, ಮಧ್ಯರಾತ್ರಿ 1 ಗಂಟೆಗೆ ಮನೆ ಮಾಲೀಕನ ಜತೆ ವಾದಕ್ಕಿಳಿದ.
ವಾಗ್ವಾದ ತಾರಕಕ್ಕೇರುತ್ತಿದ್ದಂತೆ ಗುಣಶೇಖರ್ ಹೆದರಿ ಮನೆಯಿಂದ ಹೊರಗೆ ಓಡಿಹೋದರು. ಆದರೆ ಬೆನ್ನಟ್ಟಿದ ಅಜಿತ್, ಗುಣಶೇಖರ್ನನ್ನು ಚಾಕುವಿನಿಂದ ಇರಿದ. ರಕ್ತದ ಮಡುವಿನಲ್ಲಿ ಬಿದ್ದ ಗುಣಶೇಖರ್ ಸ್ಥಳದಲ್ಲಿಯೇ ಸಾವಿಗೀಡಾದರು. ಅಜಿತ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹಿಂದಿನ ಎರಡು ಪ್ರಕರಣಗಳಲ್ಲಿ ಅಜಿತ್ನ ಹೆಸರಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಲಾಕ್ ಡೌನ್ ಅವಧಿಯಲ್ಲಿ ಮಾಲೀಕರು ಬಾಡಿಗೆಗೆ ಒತ್ತಾಯಿಸಬಾರದೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ಭೂಮಾಲೀಕರಿಗೆ ಒತ್ತಾಯಿಸಿದ್ದರೂ, ನಗರದ ಹಲವಾರು ಬಾಡಿಗೆದಾರರು ಕಿರುಕುಳವನ್ನು ಎದುರಿಸುತ್ತಿದ್ದಾರೆ ಮತ್ತು ಅವರಲ್ಲಿ ಅನೇಕರಿಗೆ ಮನೆಗಳನ್ನು ಖಾಲಿ ಮಾಡುವಂತೆ ಒತ್ತಾಯಿಸಲಾಗುತ್ತಿದೆ.
ಸಿಬಿಎಸ್ಇ ಹೊಸ ಪಠ್ಯಕ್ರಮ: ಪ್ರಮುಖ ವಿಷಯಗಳನ್ನು ಕೈಬಿಟ್ಟಿರುವುದಕ್ಕೆ ಮಮತಾ ಬ್ಯಾನರ್ಜಿ ಆಕ್ಷೇಪ