ಮಂಗಳೂರು/ಉಡುಪಿ: ಮೂರನೇ ವಾರದ ಭಾನುವಾರದ ಸಂಪೂರ್ಣ ಲಾಕ್ಡೌನ್ಗೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಸ್ತಬ್ಧವಾಗಿವೆ.
ಹಾಲು, ಪತ್ರಿಕೆ ಮಾರಾಟದ ಅಂಗಡಿಗಳು ಬೆಳಗ್ಗೆ 8ರವರೆಗೆ ತೆರೆದಿದ್ದವು. ಆಸ್ಪತ್ರೆ, ಮೆಡಿಕಲ್, ಪೆಟ್ರೋಲ್ ಬಂಕ್ಗಳು ಮಾತ್ರ ಕಾರ್ಯಾಚರಿಸಿದವು. ಮುಖ್ಯ ರಸ್ತೆಗಳಲ್ಲಿ ಪೊಲೀಸರು ತಪಾಸಣೆ ಬಿಗುಗೊಳಿಸಿದ್ದು, ತುರ್ತು ತೆರಳುವವರಿಗೆ ಮಾತ್ರ ಸಂಚರಿಸಲು ಅವಕಾಶ ನೀಡಿದ್ದಾರೆ. ಸರಕು ಸಾಗಾಟದ ಲಾರಿಗಳು ಹಾಗೂ ಗ್ಯಾಸ್ ಟ್ಯಾಂಕರ್ ಹೊರತುಪಡಿಸಿ ರಾಷ್ಟ್ರೀಯ ಹೆದ್ದಾರಿಗಳಲ್ಲೂ ವಾಹನ ಸಂಚಾರ ವಿರಳವಾಗಿತ್ತು.
ಅಲೆಮಾರಿಗಳಿಗೆ ಊಟ: ಮಂಗಳೂರಿನಲ್ಲಿ ಊಟವಿಲ್ಲದೆ ಕಂಗಾಲಾಗಿದ್ದ ನೂರಾರು ಅಲೆಮಾರಿಗಳಿಗೆ ಸ್ವಯಂ ಸೇವಾ ಸಂಘಟನೆಗಳು ನಗರದ ಹಳೇ ಕೇಂದ್ರ ಮಾರುಕಟ್ಟೆ ಬಳಿ ಊಟ ವಿತರಿಸಿದ್ದಾರೆ.
ಮಧ್ಯಾಹ್ನವಾಗುತ್ತಿದ್ದಂತೆ 200ಕ್ಕೂ ಅಧಿಕ ಅಲೆಮಾರಿಗಳು, ಭಿಕ್ಷುಕರು ಮಾರುಕಟ್ಟೆ ಪರಿಸರದಲ್ಲಿ ದೈಹಿಕ ಅಂತರ ಮರೆತು ಗುಂಪುಗೂಡಿದ್ದರು. ಇವರೆಲ್ಲ ಕೇಂದ್ರ ರೈಲು ನಿಲ್ದಾಣ, ಸ್ಟೇಟ್ಬ್ಯಾಂಕ್, ಲೇಡಿಗೋಷನ್, ಹಂಪನಕಟ್ಟೆ, ನೆಹರು ಮೈದಾನ ಮೊದಲಾದೆಡೆ ಫುಟ್ಪಾತ್, ಬಸ್ ತಂಗುದಾಣಗಳಲ್ಲಿ ನೆಲೆಸಿದ್ದವರು. ಲಾಕ್ಡೌನ್ ಇರುವುದರಿಂದ ಪ್ರತಿನಿತ್ಯ ಯಾವುದಾದರೂ ಸಂಘಟನೆಯವರು ಅಲೆಮಾರಿಗಳಿಗೆ ಊಟ ಮತ್ತು ಒಂದು ಬಾಟಲ್ ನೀರು ನೀಡುತ್ತಿದ್ದಾರೆ.