ಲಿಂಗಸುಗೂರು: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಎಚ್.ವಿಶ್ವನಾಥ ರಾಜಕೀಯ ಅಧಿಕಾರ ದಾಹದ ಅಲೆಮಾರಿಗಳು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಪಟ್ಟಣದ ಮಾತೆ ಮಾಣಿಕೇಶ್ವರಿ ಆಶ್ರಮಕ್ಕೆ ಪತ್ನಿ ಸಮೇತ ಗುರುವಾರ ಭೇಟಿ ನೀಡಿ, ನಂದಿಕೇಶ್ವರಿ ಅಮ್ಮನವರಿಂದ ಆಶೀರ್ವಾದ ಪಡೆದು, ಗೋ ಶಾಲೆಯಲ್ಲಿ ಮಾತೆ ಮಾಣಿಕೇಶ್ವರಿ ಭಾವಚಿತ್ರಕ್ಕೆ ಮತ್ತು ಗೋವುಗಳಿಗೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ವಿಶ್ವನಾಥ ಅಧಿಕಾರಕ್ಕಾಗಿ ಪಕ್ಷಾಂತರ ಮಾಡುವುದು ಸಹಜ ಎಂದರು.
ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿ, ಸಂಪುಟ ವಿಸ್ತರಣೆ ಆಗಬಹುದು ಅಥವಾ ಆಗದಿರಬಹುದು. ಎಲ್ಲರೂ ಮಂತ್ರಿಗಳಾಗಬೇಕೆಂದೇನೂ ಇಲ್ಲ. ಮಂತ್ರಿ ಆಗದವರೆಲ್ಲ ಪಕ್ಷದ ಕಾರ್ಯಕರ್ತರಾಗಿ ಪಕ್ಷ ಸಂಘಟನೆಯಲ್ಲಿ ತೊಡಗುತ್ತೇವೆಂದು ಹೇಳಿದರು.
ಬಿಜೆಪಿ ಮುಖಂಡರಾದ ಕರಿಯಪ್ಪ ವಜ್ಜಲ್, ಹನುಮಂತಪ್ಪ ಕಂದಗಲ್, ಮುದುಕಪ್ಪ ವಕೀಲ, ಹುಲ್ಲೇಶ ಸಾಹುಕಾರ, ಸಣ್ಣಸಿದ್ದಯ್ಯ ತಾತಾ, ಅಯ್ಯಪ್ಪ ವಕೀಲ, ಬೀರಪ್ಪ ಪೂಜಾರಿ, ಅಮರೇಶ ತಾವರಗೇರಾ, ಜಗದೀಶ ಹಿರೇಮಠ, ಮಲ್ಲಿಕಾರ್ಜುನ ನಾಡಗೌಡ ಇದ್ದರು.