ಲಿಂಗಸುಗೂರು: ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ಮಂಜೂರಾದ ಅನುದಾನದಲ್ಲಿ ಪರ್ಸೆಂಟೇಜ್ ಪಡೆದಿರುವ ಕುರಿತು ದಾಖಲೆ ಬಿಡುಗಡೆಗೊಳಿಸಿದರೆ ಮುಂಬರುವ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲವೆಂದು ಶಾಸಕ ಡಿ.ಎಸ್.ಹೂಲಗೇರಿ ಹೇಳಿದರು.
ಎಸಿ ಕಚೇರಿ ಆವರಣದಲ್ಲಿ 1 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಉಪನೊಂದಣಿ ಕಚೇರಿ ಕಟ್ಟಡ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಅಭಿವೃದ್ಧಿ ಶೂನ್ಯ ಮತ್ತು ತಿಳಿವಳಿಕೆ ಇಲ್ಲದ ಶಾಸಕ ಎಂದು ಚುನಾವಣೆ ಸಮೀಪಸುತ್ತಿರುವಾಗ ಬಾಯಿಗೆ ಬಂದಂತೆ ಭಾಷಣ ಬಿಗಿಯುವುದು ತರವಲ್ಲ. ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ಪಕ್ಷಭೇದವಿಲ್ಲದೆ ಸಹಕಾರ ನೀಡಬೇಕೆಂದು ಹಟ್ಟಿ ಚಿನ್ನದಗಣಿ ಕಂಪನಿ ಅಧ್ಯಕ್ಷ ಮಾನಪ್ಪ ವಜ್ಜಲಗೆ ಪರೋಕ್ಷವಾಗಿ ತಿರುಗೇಟು ನೀಡಿದರು.
ತಾಲೂಕು ಆಡಳಿತ ಭವನ ನಿರ್ಮಾಣಕ್ಕೆ 3 ಎಕರೆ ಜಮೀನು ಮೀಸಲಿರಿಸಿದ್ದು, ಕಟ್ಟಡ ನಿರ್ಮಾಣದ ಬಳಿಕ ಸರ್ಕಾರದ ಎಲ್ಲ ಕಚೇರಿಗಳ ಸಂಕೀರ್ಣವಾಗಲಿದೆ. ಆರ್ಟಿಒ ಕಚೇರಿ ಮಂಜೂರಾತಿಗೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದು, ಸಾರಿಗೆ ಸಚಿವ ಭರವಸೆ ನೀಡಿದ್ದಾರೆ ಎಂದು ಡಿ.ಎಸ್.ಹೂಲಗೇರಿ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ 3.81 ಕೋಟಿ ರೂ. ವೆಚ್ಚದ ಮೆಟ್ರಿಕ್ ನಂತರದ ಬಾಲಕಿಯರ (ವೃತ್ತಿಪರ) ವಸತಿ ನಿಲಯವನ್ನು ಕೂಡ ಶಾಸಕ ಉದ್ಘಾಟಿಸಿದರು. 2022-23 ನೇ ಸಾಲಿನ ನಗರೋತ್ಥಾನ ಹಂತ-4ರಡಿ 36 ಲಕ್ಷ ರೂ. ವೆಚ್ಚದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಪ್ರಮುಖರಾದ ಶರಣಪ್ಪ ಮೇಟಿ, ಮಲ್ಲಣ್ಣ ವಾರದ, ಗುಂಡಪ್ಪ ನಾಯಕ, ಪಾಮಯ್ಯ ಮುರಾರಿ, ಶಿವಾನಂದ ಐದನಾಳ ಇತರರು ಇದ್ದರು.