ಲಿಂಗಸುಗೂರು: ಸಮೀಪದ ಸರ್ಜಾಪುರದಲ್ಲಿ ಧಾರಾಕಾರ ಮಳೆಯಿಂದ ಹಗೇವುಗಳಲ್ಲಿ ನೀರಿನ ಬುಗ್ಗೆ ಉದ್ಭವಿಸಿ ಸಂಗ್ರಹಿಸಿದ್ದ ಜೋಳ ಜಲಾವೃತಗೊಂಡಿದೆ. ಗ್ರಾಮದಲ್ಲಿ ಸುಮಾರು 30 ರಿಂದ 40 ಹಗೇವುಗಳಿವೆ. 2009ರಲ್ಲಿ ಸಂಭವಿಸಿದ ನೆರೆ ಹಾವಳಿಯಿಂದ ಕೆಲ ರೈತರು ಹಗೇವುಗಳಲ್ಲಿ ದವಸ ಧಾನ್ಯ ಸಂಗ್ರಹಿಸುವುದು ವಿರಳವಾಗಿತ್ತು. ಇನ್ನೂ ಕೆಲ ರೈತರು ತಾವು ಬೆಳೆದ ದವಸ ಧಾನ್ಯ ಇಂದಿಗೂ ಸಂಗ್ರಹಿಸುತ್ತಿದ್ದಾರೆ.
ಗ್ರಾಮದ ರೈತರು ಪ್ರತಿ ಹಗೇವುನಲ್ಲಿ 30 ರಿಂದ 40 ಕ್ವಿಂ. ಜೋಳ ಸಂಗ್ರಹಿಸಿದ್ದರು. ಆದರೆ, ಇತ್ತೀಚೆಗೆ ಧಾರಾಕಾರ ಮಳೆಯಿಂದ ಹಗೇವುಗಳಲ್ಲಿ ನೀರಿನ ಬುಗ್ಗೆಗಳು ಉದ್ಭವಿಸಿ ಧಾನ್ಯ ಜಲಾವೃತಗೊಂಡು ಹಾನಿಗೀಡಾಗಿದೆ. ಇದರಿಂದ ವರ್ಷವಿಡಿ ಬಿತ್ತಿ ಬೆಳೆದ ರೈತರನ್ನು ಕಂಗಾಲಾಗಿಸಿದೆ. ಕೂಡಲೇ ತಾಲೂಕು ಆಡಳಿತ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರದಿಂದ ಪರಿಹಾರ ಹಣ ಒದಗಿಸಬೇಕೆಂದು ಗ್ರಾಮದ ಸಂತ್ರಸ್ತರಾದ ಯಲ್ಲಪ್ಪ ಕಾವಲಿ, ಶಿವಪ್ಪ ಚಲವಾದಿ, ಅಯ್ಯಪ್ಪ ದೇವಿಕೇರಿ, ಹನುಮಂತ ಚಲವಾದಿ, ಸಾಬಣ್ಣ ಕಾವಲಿ ಒತ್ತಾಯಿಸಿದ್ದಾರೆ.