ಲಿಂಗಸುಗೂರು: ವಿಶ್ವದ ಕಡಿಮೆ ಜನಸಂಖ್ಯೆಯುಳ್ಳ ನಾನಾ ರಾಷ್ಟ್ರಗಳು ಕರೊನಾ ನಿಯಂತ್ರಿಸಲು ಹೆಣಗಾಡಬೇಕಾಯಿತು. ಆದರೆ ಭಾರತದಂತಹ 135 ಕೋಟಿ ಜನಸಂಖ್ಯೆಯುಳ್ಳ ರಾಷ್ಟ್ರದಲ್ಲಿ ಕರೊನಾ ನಿಗ್ರಹಕ್ಕೆ ಪ್ರಧಾನಿ ನರೇಂದ್ರ ಮೋದಿಯಂತಹ ಸಮರ್ಥ ನಾಯಕತ್ವದಿಂದ ಸಾಧ್ಯವಾಯಿತು ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.
ಪಟ್ಟಣದ ಸರ್ಕಾರಿ ಮಾದರಿ ಶಾಲೆಯಲ್ಲಿ ತಾಲೂಕು ಆಡಳಿತ ಮತ್ತು ಆರೋಗ್ಯ ಇಲಾಖೆ ಶನಿವಾರ ಆಯೋಜಿಸಿದ್ದ 75ನೇ ಆಜಾದಿ ಕಾ ಅಮೃತ್ ಮಹೋತ್ಸವ ಪ್ರಯುಕ್ತ ತಾಲೂಕು ಮಟ್ಟದ ಆರೋಗ್ಯ ಮೇಳ ಉದ್ಘಾಟಿಸಿ ಮಾತನಾಡಿದರು. ಕರೊನಾ ನಿಯಂತ್ರಿಸಲು ನಿರ್ದಿಷ್ಟ ಚಿಕಿತ್ಸೆ ಸಿಗದೆ ಪರದಾಡುವ ವೇಳೆ ದೇಶದ ವಿಜ್ಞಾನಿಗಳು ಲಸಿಕೆ ಕಂಡುಹಿಡಿದದ್ದು ಹೆಮ್ಮೆಯ ವಿಷಯ ಎಂದರು.
ದೇಶದ ಜನತೆಗೆ ಉಚಿತವಾಗಿ ಲಸಿಕೆ ನೀಡುವ ಜತೆಗೆ ನೆರೆ ರಾಷ್ಟ್ರಗಳಿಗೂ ಕರೊನಾ ಲಸಿಕೆ ಪೂರೈಸಿರುವ ಕೀರ್ತಿ ಮತ್ತು ದೂರದೃಷ್ಟಿ ಚಿಂತನೆ ಪ್ರಧಾನಿ ನರೇಂದ್ರ ಮೋದಿ ಅವರದ್ದಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರೋಗ್ಯ ಸಂಬಂಧಿತ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು, ಬಡವರು, ರೈತರು, ಕೂಲಿ ಕಾರ್ಮಿಕರು ಸೇರಿ ದೇಶದ ಎಲ್ಲ ಜನತೆ ಆರೋಗ್ಯದಿಂದ ಜೀವಿಸಲು ಆರೋಗ್ಯ ಮೇಳ ಆಯೋಜಿಸಲಾಗಿದೆ ಎಂದು ತಿಳಿಸಿದರು.