ಸೊರಬ: ಸಾಗರದ ಸರ್ಕಾರಿ ಇಂದಿರಾ ಗಾಂಧಿ ಮಹಿಳಾ ಕಾಲೇಜು ಮುಂಭಾಗದ ಧ್ವಜಸ್ತಂಭದ ಆವರಣದಲ್ಲಿ ಮಾ.5ರಂದು ರಾಜ್ಯಮಟ್ಟದ ಈಡಿಗ, ಬಿಲ್ಲವ, ನಾಮಧಾರಿ ಸಮುದಾಯ ಒಳಗೊಂಡಂತೆ 26 ಪಂಗಡಗಳ ಶಕ್ತಿ ಸಾಗರ ಸಂಗಮ ಸಮಾವೇಶ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಜೀವಮಾನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದರು.
ಪಟ್ಟಣದ ತಾಲೂಕು ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದರು. ಕಳೆದ 50 ವರ್ಷದಲ್ಲಿ ಯಡಿಯೂರಪ್ಪ ಅವರು ಹೋರಾಟದ ಮೂಲಕ ಜನಸೇವೆ ಮಾಡಿದ್ದಾರೆ. ಅಲ್ಲದೆ ಜಾತಿ, ಪಕ್ಷ ಭೇದ ಮರೆತು ಎಲ್ಲ ಸಮುದಾಯದ ಅಭಿವೃದ್ಧಿಗೆ ಅನುದಾನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಗೌರವಿಸುವುದು ನಮ್ಮ ಕರ್ತವ್ಯ. ಕಾರ್ಯಕ್ರಮಕ್ಕೆ ಮಠಾಧೀಶರು, ಮಾಜಿ ಸಚಿವರು, ಶಾಸಕರೂ ಸೇರಿ ಪ್ರಮುಖ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಸುಮಾರು 40 ಸಾವಿರ ಜನರು ಸೇರುವ ನಿರೀಕ್ಷೆ ಇದೆ ಎಂದರು.
ಶಾಸಕರಾದ ಸುನಿಲ್ಕುಮಾರ್, ಉಮಾನಾಥ್ ಕೋಟ್ಯನ್, ಮಾಲೀಕಯ್ಯ ಗುತ್ತೇದಾರ್, ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಮಾಜದ ಮುಖಂಡರು ಸಮಾವೇಶದ ನೇತೃತ್ವ ವಹಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು. ಪ್ರಕಾಶ್ ತಲಕಾಲಕೊಪ್ಪ, ಜ್ಞಾನೇಶ್, ಕೆ.ಅಜ್ಜಪ್ಪ, ದೇವೇಂದ್ರಪ್ಪ ಚನ್ನಾಪುರ, ಗುರುಕುಮಾರ್ ಪಾಟೀಲ್, ಶಿವಕುಮಾರ್ ಕಡಸೂರು, ಭರಮಪ್ಪ ಪುರ, ಚಂದ್ರಪ್ಪ ಟಿ.ಜಿ.ಕೊಪ್ಪ, ದೇವೇಂದ್ರಪ್ಪ ಯಲಕುಂದ್ಲಿ, ಹುಚ್ಚಪ್ಪ ಚಿಮಣೂರು ಇದ್ದರು.