ವಿಶಾಖಪಟ್ಟಣ: 11 ಜನರನ್ನು ಬಲಿ ಪಡೆದು, ಸಾವಿರಾರು ಜನರನ್ನು ಅಸ್ವಸ್ಥಗೊಳಿಸಿದ್ದ ಆರ್.ಆರ್. ವೆಂಕಟಾಪುರದ ಎಲ್.ಜಿ. ಪಾಲಿಮರ್ಸ್ ಕಾರ್ಖಾನೆಯ ವಿಷಾನಿಲವನ್ನು ಬೇರೆಡೆ ಸಾಗಿಸಲಾಗುತ್ತಿದೆ.
ರಾಸಾಯನಿಕ ಕಾರ್ಖಾನೆಯಲ್ಲಿ ಎರಡು ಬೃಹತ್ ಟ್ಯಾಂಕ್ಗಳಲ್ಲಿ ಸ್ಟೈರೀನ್ ಅನಿಲವನ್ನು ಸಂಗ್ರಹಿಸಿ ಇಡಲಾಗಿತ್ತು. ಮೇ 7ರ ಬೆಳಗಿನ ಜಾವ ಸೋರಿಕೆ ಉಂಟಾಗಿ 11 ಜನರನ್ನು ಬಲಿ ಪಡೆದಿತ್ತು. ಸುತ್ತಲಿನ ಐದು ಹಳ್ಳಿಗಳ ಜನರು ಅಸ್ವಸ್ಥರಾಗಿದ್ದರು.
ಸೋರಿಕೆಯಾಗಿದ್ದ ಟ್ಯಾಂಕ್ನಲ್ಲಿದ್ದ ವಿಷಾನಿಲವನ್ನು ಕಂಪನಿಯ ಮುಖ್ಯ ಕಚೇರಿ ಇರುವ ದಕ್ಷಿಣ ಕೊರಿಯಾದ ಸಿಯೋಲ್ಗೆ ಸಾಗಿಸಲಾಗುತ್ತಿದೆ. ಇದಕ್ಕಾಗಿ ವಿಶೇಷ ಕಂಟೇನರ್ ಟ್ಯಾಂಕ್ವುಳ್ಳ ಹಡಗೊಂದು 8,000 ಟನ್ ಸ್ಟೈರೀನ್ ಅನಿಲವನ್ನು ತುಂಬಿಕೊಂಡು ಸಿಯೋಲ್ನತ್ತ ಈಗಾಗಲೇ ಪ್ರಯಾಣ ಬೆಳೆಸಿದೆ. ಇನ್ನುಳಿದ ಅನಿಲ 5000 ಟನ್ ಅನಿಲವನ್ನು ಇನ್ನೆರಡು ದಿನಗಳೊಳಗೆ ಸಾಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ವಿ. ವಿನಯ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ; ಕರೊನಾ ಲಸಿಕೆ ಸಂಶೋಧನೆ ಮಾಹಿತಿಗೆ ಚೀನಾ ಹ್ಯಾಕರ್ಗಳಿಂದ ಕನ್ನ…!
ಸದ್ಯ ಕಾರ್ಖಾನೆಯ ಇನ್ನೊಂದು ಟ್ಯಾಂಕ್ ಹಾಗೂ ವಿಶಾಖಪಟ್ಟಣದ ಬಂದರಿನಲ್ಲಿರುವ ಮತ್ತೆರಡು ಟ್ಯಾಂಕ್ಗಳಲ್ಲಿ ಸಿಂಗಾಪುರದಿಂದ ಆಮದು ಮಾಡಿಕೊಂಡ ಸ್ಟೈರೀನ್ ಅನಿಲವನ್ನು ಸಂಗ್ರಹಿಸಿಡಲಾಗಿದೆ. ಆಂಧ್ರಪ್ರದೇಶ ಸರ್ಕಾರವು ಕೇಂದ್ರದೊಂದಿಗೆ ಮಾತುಕತೆ ನಡೆಸಿ ರಾಸಾಯನಿಕವನ್ನು ಸಿಯೋಲ್ಗೆ ಕಳುಹಿಸಲು ವಿಶೇಷ ಹಡಗಿನ ವ್ಯವಸ್ಥೆ ಮಾಡಿತ್ತು.
ಭಾರಿ ದುರಂತಕ್ಕೆ ಕಾರಣವಾಗಿದ್ದು ಸಣ್ಣ ಸೋರಿಕೆಯಷ್ಟೇ ಒಂದು, ಟ್ಯಾಂಕ್ನಲ್ಲಿದ್ದ ಅನಿಲವೆಲ್ಲ ಸೋರಿಕೆಯಾಗಿದ್ದರೆ ಉಂಟಾಗುತ್ತಿದ್ದ ದುರಂತವನ್ನು ಊಹಿಸಲು ಸಾಧ್ಯವಿಲ್ಲ. ಭೋಪಾಲ್ ಅನಿಲ ದುರಂತವನ್ನು ಮೀರಿಸುವ ಘಟನೆ ಇದಾಗುತ್ತಿತ್ತು.
ಈ ನಡುವೆ, ದುರಂತದಲ್ಲಿ ಮೃತಪಟ್ಟ ಐವರ ಕುಟುಂಬಗಳಿಗೆ ಒಂದು ಕೋಟಿ ರೂ. ಪರಿಹಾರ ವಿತರಿಸಲಾಗಿದ್ದು, ಇನ್ನುಳಿದವರ ವಾರಸುದಾರರನ್ನು ಪತ್ತೆ ಹಚ್ಚಲಾಗುತ್ತಿದೆ.
ಇದನ್ನೂ ಓದಿ; ಗಳಿಸಿದ್ದನ್ನೆಲ್ಲ ವ್ಯಯಿಸಿ, ಊರು ತಲುಪಿದರೂ ಮನೆಗೆ ಸೇರಿಸಲಿಲ್ಲ ಪತ್ನಿ..!
ಕಾರ್ಖಾನೆಯನ್ನು ಸ್ಥಳಾಂತರಿಸುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು, ಅವರಲ್ಲಿ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಸುತ್ತಲಿನ ಐದು ಗ್ರಾಮಗಳಲ್ಲಿ ತಲಾ ಒಬ್ಬ ಸಚಿವರು ಗ್ರಾಮ ವಾಸ್ತ್ಯವ್ಯ ನಡೆಸುವಂತೆ ಸಿಎಂ ಜಗನ್ಮೋಹನ್ ರೆಡ್ಡಿ ಸೂಚಿಸಿದ್ದಾರೆ.