ಮಂಗಳೂರು: ನಗರದ ಮೂರು ದೈವಸ್ಥಾನಗಳ ಕಾಣಿಕೆ ಡಬ್ಬಿಗಳಲ್ಲಿ ಹಿಂದು ಧರ್ಮವನ್ನು ಅವಹೇಳನ ಮಾಡಿ, ಕ್ರೈಸ್ತ ಧರ್ಮವನ್ನು ಪ್ರತಿಪಾದಿಸಿ ನೋಟು ಹಾಗು ಪತ್ರದಲ್ಲಿ ಬರೆದ ಬರಹ ಪತ್ತೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಸಮಾಜದಲ್ಲಿ ಶಾಂತಿ ಕದಡುವ ಹುನ್ನಾರದಿಂದ ಕಿಡಿಗೇಡಿಗಳು ಈ ಕೃತ್ಯ ನಡೆಸಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಅತ್ತಾವರ ಬಾಬುಗುಡ್ಡೆ ಭಗವಾನ್ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಎರಡು ಮತ್ತು ಕೊಟ್ಟಾರ ಕಲ್ಲುರ್ಟಿ ದೈವಸ್ಥಾನದ ಕಾಣಿಕೆ ಡಬ್ಬಿಗಳಲ್ಲಿ ಈ ಕೃತ್ಯ ಬೆಳಕಿಗೆ ಬಂದಿದೆ.
ಬಾಬುಗುಡ್ಡೆಯಲ್ಲಿದ್ದ ಒಂದು ಕಾಣಿಕೆ ಡಬ್ಬಿಯಲ್ಲಿ 200 ರೂ.ಮುಖಬೆಲೆಯ ಖೋಟಾನೋಟಿನ ಒಂದು ಭಾಗದಲ್ಲಿ ಅವಹೇಳನಕಾರಿ ಬರಹವಿದೆ. ಕಾಂಡೋಮ್ ಅನ್ನು ಕೂಡ ಡಬ್ಬಿಗೆ ಹಾಕಲಾಗಿದೆ. ಗುರುವಾರ ಈ ದೈವಸ್ಥಾನದ ಕಾಣಿಕೆ ಹುಂಡಿ ತೆರೆದಾಗ ಈ ಕೃತ್ಯ ಗಮನಕ್ಕೆ ಬಂದಿದೆ.
ಸಮೀಪದಲ್ಲೇ ಇರುವ ಇನ್ನೊಂದು ಕಾಣಿಕೆ ಡಬ್ಬಿಯಲ್ಲಿ 20 ರೂ.ನೋಟಿನ ಮೇಲೆ ಹಿಂದೂಗಳನ್ನು ಅವಮಾನಿಸಿ ಬರೆಯಲಾಗಿದೆ. ‘ಪ್ರಭು ಯೇಸು ಕ್ರಿಸ್ತರು ಮಾತ್ರ ಆರಾಧನೆ ಹೊಂದಲು ಸೂಕ್ತ ದೇವರಾಗಿದ್ದಾರೆ. ಮುಸಲರನ್ನು ಹಂದಿಗಳಂತಿರುವ ಹಿಂದುಗಳನ್ನು ಅಟ್ಟಾಡಿಸಿ ಹೊಡೆದು ಕೊಲ್ಲಬೇಕು’ ಎಂದು ಬರೆದು ಕಾಣಿಕೆ ಡಬ್ಬಿಯಲ್ಲಿ ಹಾಕಿದ್ದಾರೆ.
ದೈವಸ್ಥಾನದ ಸಮಿತಿ ಶನಿವಾರ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಸ್ಥಳೀಯರು ಶುಕ್ರವಾರ ಸಾಮೂಹಿಕವಾಗಿ ಪ್ರಾರ್ಥನೆ ಮಾಡಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ದೈವದಲ್ಲಿ ಬೇಡಿಕೊಂಡಿದ್ದಾರೆ. ಕೆಲವು ಸಮಯದ ಹಿಂದೆ ನಂತೂರು ಬಳಿಯೂ ಕಾಣಿಕೆ ಡಬ್ಬಿಯಲ್ಲಿ ಅವಹೇಳನಕಾರಿ ಪತ್ರ ಪತ್ತೆಯಾಗಿತ್ತು. ಒಂದೇ ತಂಡ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಕೊಟ್ಟಾರದ ಕಲ್ಲುರ್ಟಿ ದೈವಸ್ಥಾನದ ಕಾಣಿಕೆ ಡಬ್ಬಿಯಲ್ಲಿ ನ.11ರಂದು ಕ್ರಿಸ್ತ ಧರ್ಮವನ್ನು ಪ್ರತಿಪಾದಿಸಿ ಬರೆದ ಸುದೀರ್ಘ ಪತ್ರ ಪತ್ತೆಯಾಗಿತ್ತು.