More

    ಬಸವಣ್ಣನ ತತ್ವ ಅಳವಡಿಸಿಕೊಂಡು ಬದುಕೋಣ: ಬಿ.ವೈ.ರಾಘವೇಂದ್ರ

    ಸೊರಬ: ಮಾನವೀಯ ಬದುಕು ಭಾರತದ ಎಲ್ಲ ಧರ್ಮಗಳ ಸಾರ. ಬಸವಣ್ಣನ ಕಾಯಕವೇ ಕೈಲಾಸ ತತ್ವ ಅಳವಡಿಸಿಕೊಂಡು ಎಲ್ಲರೂ ಬದುಕಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
    ಸೋಮವಾರ ಪಟ್ಟಣದ ಕಾನುಕೇರಿ ಮಠದಲ್ಲಿ ಸೊರಬ ಟೌನ್ ವೀರಶೈವ ಸಮಾಜ ಸಮಿತಿಯಿಂದ ಹಮ್ಮಿಕೊಂಡಿದ್ದ ಶ್ರೀ ಸದ್ಗುರು ಸೇವಾ ಟ್ರಸ್ಟ್‌ನಡಿ ಕರ್ನಾಟಕ ನೀರಾವರಿ ನಿಗಮದಿಂದ ನಿರ್ಮಿಸಿರುವ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದರು.
    ಭಕ್ತರಿಗೆ ಅನ್ನ, ಶಿಕ್ಷಣ ನೀಡುವಲ್ಲಿ ಮಠಗಳ ಪಾತ್ರ ಹಿರಿದು. ಕಾನುಕೇರಿ ಮಠದ ಅಭಿವೃದ್ಧಿಗೆ ಯಡಿಯೂರಪ್ಪ ಅವರು 1 ಕೋಟಿ ರೂ. ಅನುದಾನ ನೀಡಿದ್ದರು. ಆ ಅನುದಾನದ ಜತೆಗೆ ಭಕ್ತರ ಸಹಕಾರದಲ್ಲಿ ಅತ್ಯುತ್ತಮ ಸಮುದಾಯ ಭವನ ನಿರ್ಮಾಣವಾಗಿದೆ. ಸೊರಬ ತಾಲೂಕಿನಲ್ಲಿ ಅನೇಕ ಶಾಸನಗಳು ಕಂಡುಬಂದಿವೆ. ರಾಜ್ಯದಲ್ಲಿ ಎಲ್ಲ ಜಾತಿ, ಧರ್ಮಗಳನ್ನು ವಿಶ್ವಾಸಕ್ಕೆ ಪಡೆಯುತ್ತ ವೀರಶೈವ ಧರ್ಮ ಆಲದ ಮರದಂತೆ ಬೆಳೆಯುತ್ತಿದೆ ಎಂದರು.
    ಗೊಗ್ಗೇಹಳ್ಳಿ ಪಂಚಮಠ ಸಂಸ್ಥಾನದ ಶ್ರೀ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜಗತ್ತಿಗೆ ಭಾರತ ತಳಹದಿಯಾಗಿದ್ದು, ಗುರುಪರಂಪರೆ, ವೀರಶೈವ ವಿರಕ್ತ ಮಠಗಳು ನಾಡಿನಲ್ಲಿ ಧಾರ್ಮಿಕತೆ ಬಿತ್ತುತ್ತಿವೆ. ಹಿಂದಿನ ಗುರುಗಳಲ್ಲಿ ಗುರಿ, ಗುಣಗಳಿದ್ದವು. ಮನುಷ್ಯ ಹಲವಾರು ನಿರೀಕ್ಷೆಗಳನ್ನು ಹೊಂದಿದ್ದು ಈಡೇರಿಸಲು ಗುರುಗಳ ಆಶೀರ್ವಾದ ಮುಖ್ಯ ಎಂದರು.
    ಕಾನುಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಾವು ಮಾಡುವ ಕೆಲಸಗಳು ನಮಗೆ ಹಾಗೂ ಇತರರಿಗೆ ಖುಷಿ ನೀಡಬೇಕು. ಈ ದಿಸೆಯಲ್ಲಿ ಕಾನುಕೇರಿ ಮಠದ ಸಮುದಾಯ ಭವನ ನಿರ್ಮಾಣವಾಗಿದೆ. ಆತ್ಮವು ಮೋಕ್ಷ ಪಡೆದುಕೊಂಡು ಜಗತ್ತಿನ ಹಿತ ಬಯಸಬೇಕು. ಮಠ ಎಂಬುದು ಸ್ವಾಮೀಜಿಗಳು ಇರುವುದಷ್ಟೇ ಅಲ್ಲ ಪಾಠಶಾಲೆಯೂ ಇರಬೇಕು ಎಂಬುದನ್ನು ಹಿರಿಯರು ಮಾಡಿಟ್ಟಿದ್ದಾರೆ. ಇಂದಿನ ಜನತೆಗೆ ಆಧ್ಯಾತ್ಮ ಬೇಕಾಗಿದೆ ಎಂದು ಹೇಳಿದರು.

    ಹಿರೇಮಾಗಡಿ ಮುರುಘರಾಜೇಂದ್ರ ಮಠದ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ, ತೊಗರ್ಸಿ ಮಳೇ ಹಿರೇಮಠದ ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮೀಜಿ, ಕ್ಯಾಸನೂರು ಹಿರೇಮಠದ ಶ್ರೀ ಗುರುಬಸವ ಪಂಡಿತರಾಧ್ಯ ಶಿವಾಚಾರ್ಯರು, ಮೂಡಿ ಶಿವಲಿಂಗೇಶ್ವರ ಮಠದ ಶ್ರೀ ಸದಾಶಿವ ಸ್ವಾಮೀಜಿ, ಪ್ರಜಾಪಿತ ಬ್ರಹ್ಮಕುಮಾರಿ ವಿದ್ಯಾಲಯದ ರಾಜಯೋಗಿನಿ ಚೇತನಕ್ಕ, ಟೌನ್ ವೀರಶೈವ ಸಮಾಜ ಸಮಿತಿ ಅಧ್ಯಕ್ಷ ಎಚ್.ಮಲ್ಲಿಕಾರ್ಜುನಪ್ಪ, ಮಧ್ಯ ಕರ್ನಾಟಕ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಅಧ್ಯಕ್ಷ ಸಿ.ಪಿ.ಈರೇಶಗೌಡ, ಪ್ರಮುಖರಾದ ರಾಜು ತಲ್ಲೂರು, ನಾಗರಾಜ ಗುತ್ತಿ, ಎಚ್.ಆರ್.ಅಶೋಕ ನಾಯಕ ಅಂಡಿಗೆ, ಬಸವರಾಜ್ ಭಾರಂಗಿ, ಪಂಚಾಕ್ಷರಪ್ಪಗೌಡ ಬೆದವಟ್ಟಿ, ಮಧುರಾಯ್ ಜಿ. ಶೇಟ್, ಆಫ್ರಿನ್, ನಟರಾಜ ಉಪ್ಪಿನ, ರೇಣುಕಮ್ಮ ಗೌಳಿ, ಮಮತಾ, ಚಂದ್ರಶೇಖರ್ ನಿಜಗುಣ ಇತರರಿದ್ದರು.

    ಪ್ರಧಾನಿಯಿಂದ ಚುನಾವಣೆ ಪ್ರಚಾರ

    ನರೇಂದ್ರ ಮೋದಿ ಅವರು ದೇಶದ ಪ್ರಗತಿಗೆ ಸಾಕಷ್ಟು ಒತ್ತು ನೀಡಿದ್ದಾರೆ. ಆಗುಂಬೆ ಘಾಟ್‌ನಲ್ಲಿ ವಾಹನಗಳ ಸಂಚಾರಕ್ಕೆ ಕಷ್ಟವಾಗುವುದರಿಂದ 16 ಕಿ.ಮೀ ಸುರಂಗ ಮಾರ್ಗ ನಿರ್ಮಿಸಲು 3 ಸಾವಿರ ಕೋಟಿ ರೂ. ಅನುದಾನ ನೀಡುವುದಾಗಿ ಕೇಂದ್ರ ಮಂತ್ರಿ ನಿತಿನ್ ಗಡ್ಕರಿ ಮೈಸೂರಿನಲ್ಲಿ ಘೋಷಿಸಿದ್ದಾರೆ. ಪ್ರಧಾನಿ ಅವರು ಲೋಕಸಭೆ ಚುನಾವಣೆ ಪ್ರಚಾರವನ್ನು ಭಾನುವಾರ ಶಿವಮೊಗ್ಗದಿಂದಲೇ ಆರಂಭಿಸುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮುಖಂಡ ಕಾರ್ಯಕರ್ತರು ಪಾಲ್ಗೊಳ್ಳಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts