More

    ಸಂವಿಧಾನ ಕುರಿತು ಜಾಗೃತಿ ಹೆಚ್ಚಾಗಲಿ

    ನಂಜನಗೂಡು: ಸಂವಿಧಾನದ ಕುರಿತು ಜನರಲ್ಲಿ ಜಾಗೃತಿ ಮೂಡಿದಾಗ ಮಾತ್ರ ಅದರ ಮಹತ್ವವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜನರಲ್ಲಿ ಬೇರೂರುವಂತೆ ಮಾಡಲು ಸಾಧ್ಯ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.

    ಮಾಜಿ ಸಂಸದ ಆರ್.ಧ್ರುವನಾರಾಯಣ ಅವರ ಮೊದಲ ವರ್ಷದ ಪುಣ್ಯಸ್ಮರಣೆ ಅಂಗವಾಗಿ, ಭಾನುವಾರ ಕರ್ನಾಟಕ ಅಹಿಂದ ಸಮಾನ ಮನಸ್ಕರ ವೇದಿಕೆ ವತಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಒಳಮೀಸಲಾತಿ ಹಾಗೂ ಜಾತಿಗಣತಿ ಕುರಿತ ವಿಚಾರ ಸಂಕೀರ್ಣ ಉದ್ಘಾಟಿಸಿ ಮಾತನಾಡಿದರು.

    ಸಂವಿಧಾನ ಉಳಿಸುವ ಹಾಗೂ ಅದನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇಂತಹ ಹೊತ್ತಿನಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳಲ್ಲಿ ಸಂವಿಧಾನದ ಕುರಿತು ಆಳವಾದ ಚರ್ಚೆ, ಅಧ್ಯಯನಗಳು ಆಗಬೇಕು. ಜನರಲ್ಲಿ ಅರಿವು ಮೂಡಿಸುವ ಕೆಲಸವಾದಾಗ ಮಾತ್ರ ಸಂವಿಧಾನ ಮತ್ತಷ್ಟು ಪ್ರಖರವಾಗಿ ಜನಸಾಮಾನ್ಯರಲ್ಲಿ ಬೇರೂರುತ್ತದೆ. ಈ ಕಾರಣಕ್ಕಾಗಿ ರಾಜ್ಯ ಸರ್ಕಾರ ಸಂವಿಧಾನ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡು ರಾಜ್ಯವ್ಯಾಪಿ ಅದರ ಮಹತ್ವವನ್ನು ಸಾರುವ ಕೆಲಸ ಮಾಡಿದೆ ಎಂದರು.

    ಆರ್.ಧ್ರುವನಾರಾಯಣ ಅವರು ಸಂಸದರಾಗಿದ್ದಾಗ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಿ ಚಾಮರಾಜನಗರ ಕ್ಷೇತ್ರದಲ್ಲಿ ಸಾಕಷ್ಟು ವಸತಿ ಶಾಲೆಗಳು, ಕೇಂದ್ರೀಯ ವಿದ್ಯಾಲಯ, ಮೆಡಿಕಲ್ ಕಾಲೇಜು, ಆಸ್ಪತ್ರೆಗಳನ್ನು ಮಂಜೂರು ಮಾಡಿಸುವ ಮೂಲಕ ಸರ್ವಾಂಗೀಣ ಪ್ರಗತಿಗೆ ಒತ್ತು ನೀಡಿದ್ದರು. ಧ್ರುವನಾರಾಯಣ ಅವರ ದೂರದೃಷ್ಟಿ ಫಲವಾಗಿ ಚಾಮರಾಜನಗರದಲ್ಲೂ ಕೈಗಾರಿಕಾ ಪ್ರದೇಶ ಸ್ಥಾಪಿಸಿ ಬಹುರಾಷ್ಟ್ರೀಯ ಕಂಪನಿಗಳು ಚಾಮರಾಜನಗರದತ್ತ ಮುಖ ಮಾಡುತ್ತಿದ್ದು, ಸ್ಥಳೀಯವಾಗಿ ಉದ್ಯೋಗವಕಾಶಗಳು ಹೆಚ್ಚಲು ಸಹಕಾರಿಯಾಗಿದೆ ಎಂದು ಹೇಳಿದರು.

    ಹೈಕೋರ್ಟ್ ನ್ಯಾಯವಾದಿ ಎಚ್.ಮೋಹನ್‌ಕುಮಾರ್ ಮಾತನಾಡಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮುಸ್ಲೀಮರಿಗಿಂತ ಕಡಿಮೆ ಪ್ರಮಾಣದಲ್ಲಿ ಲಿಂಗಾಯತರು ಹಾಗೂ ಒಕ್ಕಲಿಗರು ಇದ್ದಾರೆ ಎಂಬ ಅಂಶ ಬೆಳಕಿಗೆ ಬರಲಿದೆ ಎಂಬ ಆತಂಕದಿಂದ ಜಾತಿಗಣತಿ ವರದಿ ಬಹಿರಂಗ ಪಡಿಸಲು ವಿರೋಧ ವ್ಯಕ್ತವಾಗುತ್ತಿದೆ. ಸಾಂಸ್ಕೃತಿಕವಾಗಿ ಒಂದಾಗಿರುವ ಸಮುದಾಯಗಳು ರಾಜಕೀಯವಾಗಿ ಒಂದಾಗಬಾರದು ಎಂಬ ಹುನ್ನಾರ ನಡೆಯುತ್ತಿದೆ. ಸಾಂಸ್ಕೃತಿಕವಾಗಿ ಒಂದಾಗಿರುವ ಸಮುದಾಯಗಳನ್ನು ದೂರ ಮಾಡುವ ಸಲುವಾಗಿಯೇ ಜಾತಿ, ಧರ್ಮಗಳ ನಡುವೆ ದ್ವೇಷಭಾವ ಬಿತ್ತಲಾಗುತ್ತಿದೆ ಎಂದು ಹೇಳಿದರು.

    ಸರ್ಕಾರಿ ಸ್ವಾಮ್ಯದ ಎಲ್ಲ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಮೂಲಕ ಮೀಸಲಾತಿಯನ್ನು ನಾಶ ಮಾಡುವ ಮತ್ತೊಂದು ಒಳಸಂಚು ನಡೆಯುತ್ತಿದೆ. 5.5 ಲಕ್ಷ ಬ್ಯಾಕ್‌ಲಾಕ್ ಹುದ್ದೆಗಳನ್ನು ಭರ್ತಿ ಮಾಡದೇ ಕೇಂದ್ರ ಸರ್ಕಾರ ವಂಚಿಸಿದೆ. ಖಾಸಗೀಕರಣವೇ ಆದ ಮೇಲೆ ಅಲ್ಲಿ ಮೀಸಲಾತಿ ಕೇಳಲು ಸಾಧ್ಯವಿಲ್ಲ. ಮೀಸಲಾತಿ ಅಸ್ಥಿತ್ವವನ್ನು ಕ್ರಮೇಣ ಕುಗ್ಗಿಸುವ ಷಡ್ಯಂತ್ರ ಇದಾಗಿದೆ ಎಂದರು.

    ಮೈಸೂರು ವಿವಿ ಬಿಐಎಂಎಸ್ ಪ್ರಾಧ್ಯಾಪಕ ಪ್ರೊ.ಡಿ.ಆನಂದ್ ಮಾತನಾಡಿ, ಶಾಸನ ಸಭೆಗಳಲ್ಲಿ ಗಟ್ಟಿ ಧ್ವನಿ ಎತ್ತುವ ನಾಯಕರ ಕೊರತೆಯಿಂದಾಗಿ ಸಂವಿಧಾನ ಹಾಗೂ ಮೀಸಲಾತಿ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದೆ. ದೂರದೃಷ್ಟಿಯುಳ್ಳ ನಾಯಕರನ್ನು ಹುಟ್ಟುಹಾಕಬೇಕಿದೆ. ಶೈಕ್ಷಣಿಕ ಕ್ರಾಂತಿಯಿಂದ ಮಾತ್ರ ಸಮಷ್ಟಿ ಪ್ರಜ್ಞೆಯನ್ನು ಹುಟ್ಟುಹಾಕಲು ಸಾಧ್ಯ. ಆರ್ಥಿಕ ಸ್ಥಿತಿಗತಿ ಮೇಲೆ ಮೀಸಲಾತಿ ಸಿಗುವಂತಾಗಬೇಕು. ಖಾಸಗಿ ಸಂಸ್ಥೆಗಳಲ್ಲಿ ಹೆಸರಿನ ಆಧಾರದ ಮೇಲೆಯೇ ಉದ್ಯೋಗವನ್ನು ತಿರಸ್ಕರಿಸುವ ಬಹುದೊಡ್ಡ ವಂಚನೆ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

    ಪ್ರಗತಿಪರ ಚಿಂತಕ ಸಿ.ಹರಕುಮಾರ್ ಮಾತನಾಡಿ, ಪ್ರಸ್ತುತ ದಿನದಲ್ಲಿ ಮೀಸಲಾತಿ ತನ್ನ ಪ್ರಾವಿತ್ರ್ಯತೆಯನ್ನು ಕಳೆದುಕೊಂಡು ಗಬ್ಬು ನಾರುವಂತಾಗಿದೆ. ಅರ್ಹರಿಗಿಂತ ಅನರ್ಹರೇ ಮೀಸಲಾತಿ ಫಲಾನುಭವಿಗಳಾಗುತ್ತಿದ್ದಾರೆ. ಮೀಸಲಾತಿ ಪರಿಷ್ಕರಿಸುವ ಸಂವಿಧಾನ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ ಎಂದಾದರೆ ರಾಜ್ಯ ಸರ್ಕಾರ ಯಾವ ಪುರುಷಾರ್ಥಕ್ಕಾಗಿ ಸದಾಶಿವ ಆಯೋಗ ಹಾಗೂ ನಾಗಮೋಹನ್ ದಾಸ್ ಆಯೋಗವನ್ನು ರಚಿಸಿ ವರದಿಯನ್ನು ಕೇಂದ್ರ ಸರ್ಕಾರದ ವಿವೇಚನೆಗೆ ಬಿಡಲಾಗಿದೆ ಎಂದು ಹೇಳುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಮಾಜಿ ಶಾಸಕ ಕಳಲೆ ಎನ್.ಕೇಶವಮೂರ್ತಿ, ಕರ್ನಾಟಕ ಅಹಿಂದ ಸಮಾನ ಮನಸ್ಕರ ವೇದಿಕೆ ರಾಜ್ಯ ಸಂಚಾಲಕ ಡಿ.ಈಶ್ವರ್ ತೊರೆಮಾವು, ಶೇಖರ್ ಕಿರುಗುಂದ, ಜಿಲ್ಲಾ ಸಂಚಾಲಕ ಮುಳ್ಳೂರು ಕೃಷ್ಣ, ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ದ್ಯಾವಪ್ಪನಾಯಕ, ಉಪ್ಪಾರ ಸಂಘದ ಜಿಲ್ಲಾಧ್ಯಕ್ಷ ಯೋಗೀಶ್ ಉಪ್ಪಾರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts