ಹಿರೀಸಾವೆ: ಗ್ರಾಮೀಣ ಪ್ರದೇಶ ಅಭಿವೃದ್ಧಿ ಹೊಂದಿದಾಗ ಮಾತ್ರ ದೇಶ ಪ್ರಗತಿ ಕಾಣಲು ಸಾಧ್ಯ ಎಂದು ನಬಾರ್ಡ್ ಜಿಲ್ಲಾ ಡಿಡಿಎಂ ಮಾಲಿನಿ ಎಂ.ಸುವರ್ಣಾ ಹೇಳಿದರು.
ಹೋಬಳಿಯ ದಿಡಗ ಗ್ರಾಮದ ಬಾಹುಬಲಿ ಕೃಷಿ ರೈತ ಉತ್ಪಾದಕರ ಕಂಪನಿ ವತಿಯಿಂದ ಆಯೋಜಿಸಿದ್ದ 2022-23 ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಬೆವರು ಸುರಿಸಿ ದುಡಿಯುವ ರೈತರ ಬದುಕು ಹಸನಾಗಬೇಕು ಎಂದರು.
ನಿತ್ಯ ಹೊಸ ಪ್ರಯೋಗದೊಂದಿಗೆ ಅಗತ್ಯಕ್ಕೂ ಮೀರಿದಂತೆ ಆಹಾರ ಪದಾರ್ಥಗಳ ಉತ್ಪಾದನೆಯಲ್ಲಿ ತೊಡಗುವ ರೈತ ಒಬ್ಬ ವಿಜ್ಞಾನಿ ಇದ್ದಂತೆ. ಆದರೆ ಅಗತ್ಯ ಸೌಲಭ್ಯಗಳ ಕೊರತೆ ಹಾಗೂ ಆರ್ಥಿಕ ಸಹಕಾರವಿಲ್ಲದ ಕಾರಣ ಕೈ ಚೆಲ್ಲಿ ಕೂರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಬ್ಬಳಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ದಿನೇಶ್ಕುಮಾರ್ ರೆಡ್ಡಿ ಮಾತನಾಡಿ, ಬ್ಯಾಂಕಿಗೆ ಸಂಬಂಧಿಸಿದಂತೆ ಏನೇ ಕೆಲಸವಿದ್ದರೂ ಅಧಿಕಾರಿಗಳೊಂದಿಗೆ ವ್ಯವಹರಿಸಬೇಕು ಎಂದು ಸಲಹೆ ನೀಡಿದರು.
ದಿಡಗ ಗ್ರಾಮ ಪಂಚಾಯಿತಿ ಪಿಡಿಒ ಕೆ.ಎಸ್.ಪ್ರಕಾಶ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಬಿ.ಆರ್.ನಾಗೇಂದ್ರಕುಮಾರ್, ಅರಸೀಕೆರೆ ಕೆನರಾ ಬ್ಯಾಂಕ್ ಅಧಿಕಾರಿ ಕುಸುಮಾ, ಸ್ನೇಹ ಸೇವಾ ಸಂಸ್ಥೆ ಅಧ್ಯಕ್ಷ ಎಸ್.ಜಿ.ಚಕ್ರವರ್ತಿ,ಬಿ.ಎನ್.ರಂಗಪ್ಪ, ಕೆಂಪೇಗೌಡ ಇತರರು ಇದ್ದರು.