ಅಂಕೋಲಾ: ಮೀನುಗಾರಿಕೆಯನ್ನೇ ಮೂಲ ಉದ್ಯಮವನ್ನಾಗಿಸಿಕೊಂಡ ಕೊಂಕಣ ಖಾರ್ವಿ ಸಮಾಜ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಮುಖ್ಯವಾಹಿನಿಗೆ ಬರಲು ಎಲ್ಲರ ಸಹಕಾರ ಅಗತ್ಯ ಎಂದು ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ ಹೇಳಿದರು.
ಪಟ್ಟಣದ ಪಿ.ಎಂ. ಪ್ರೌಢಶಾಲೆಯ ರೈತಭವನದಲ್ಲಿ ಕೊಂಕಣ ಖಾರ್ವಿ ಸಮಾಜದ ನೌಕರರ ಸಂಘದ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ 2022-23ನೇ ಸಾಲಿನ ಖಾರ್ವಿ ಸಮಾಜದ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಬಡ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೊಂಕಣ ಖಾರ್ವಿ ಸಮಾಜದವರು ಮೀನುಗಾರರು ಎಂಬ ಉದಾಸೀನ ಬೇಡ. ಅವರ ಮಕ್ಕಳೂ ಹೆಚ್ಚಿನ ಸಾಧನೆ ಮಾಡಲಿ. ಖಾರ್ವಿ ಸಮಾಜದ ನೌಕರರ ಸಂಘ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸುಕೊಳ್ಳುವಂತಾಗಲಿ ಎಂದರು.
ತಾಲೂಕಿನ ವಿವಿಧ ಶಾಲೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಭೂಮಾಪನಾ ಇಲಾಖೆ ನಿವೃತ್ತ ಅಧಿಕಾರಿ ಕೃಷ್ಣಾ ತಾಂಡೇಲ, ನಿವೃತ್ತ ಪೊಲೀಸ್ ಅಧಿಕಾರಿ ಚುಡಾಮಣಿ ತಾಂಡೇಲ, ನಿವೃತ್ತ ಇಂಜಿನಿಯರ್ ಜ್ಞಾನೇಶ್ವರ ಬಾನಾವಳಿಕರ ಅವರನ್ನು ಗೌರವಿಸಲಾಯಿತು. ನ್ಯಾಯವಾದಿ ಸುರೇಶ ಬಾನಾವಳಿಕರ, ವಾಕರಸಾ ಸಂಸ್ಥೆ ಕುಮಟಾ ಡಿಪೋ ವ್ಯವಸ್ಥಾಪಕ ಯುಗಾ ಬಾನಾವಳಿಕರ ಮಾತನಾಡಿದರು. ಸಂಘಟಕ ಜಿ.ಆರ್. ತಾಂಡೇಲ, ನಾಗರಾಜ ಬಾನಾವಳಿಕರ ನಿರ್ವಹಿಸಿದರು.
ಕೊಂಕಣ ಖಾರ್ವಿ ಸಮಾಜದ ಪ್ರತಿಭೆಗಳನ್ನು ಪೋ›ತ್ಸಾಹಿಸುವ ಪ್ರಪ್ರಥಮ ಕಾರ್ಯಕ್ರಮ ಇದಾಗಿದ್ದು, ಸಮಾಜದ ಪ್ರತಿಭಾವಂತ ಹಾಗೂ ಕ್ರಿಯಾಶೀಲ ಶಿಕ್ಷಕ ಜಿ.ಆರ್. ತಾಂಡೇಲ ಅವರ ಪ್ರಯತ್ನ ಶ್ಲಾಘನೀಯ. ಸಮಾಜದ ಪ್ರಮುಖರು ಇಂತಹ ಕಾರ್ಯಕ್ಕೆ ಕೈಜೋಡಿಸಬೇಕು. ಮೀನುಗಾರರು ಮೀನುಗಾರಿಕೆ ಜತೆಗೆ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು.
| ಸುರೇಶ ಬಾನಾವಳಿಕರ ನ್ಯಾಯವಾದಿ ಅಂಕೋಲಾ
ಮೀನುಗಾರ ಸಮಾಜಕ್ಕೆ ಶೈಕ್ಷಣಿಕ, ಔದ್ಯೋಗಿಕ ಮಾಹಿತಿಯ ಕೊರತೆ ಕಾಡುತ್ತದೆ. ಕೊಂಕಣ ಖಾರ್ವಿ ಸಮಾಜದ ನೌಕರರ ಸಂಘದ ವತಿಯಿಂದ ಸಮಾಜದ ಮಕ್ಕಳಿಗಾಗಿಯೇ ಉನ್ನತ ವ್ಯಾಸಂಗದ ಕೋಚಿಂಗ್ ಕ್ಲಾಸ್ಗಳನ್ನು ಪ್ರಾರಂಭಿಸಬೇಕು.
| ತುಳಸೀದಾಸ ಬಾನಾವಳಿಕರ ಅವರ್ಸಾ