ಕೊಳ್ಳೇಗಾಲ: ರಾಜ್ಯದಲ್ಲಿ ಪಶು ವೈದ್ಯರ ಕೊರತೆ ಇದ್ದು ಜಾನುವಾರುಗಳ ಹಿತದೃಷ್ಟಿಯಿಂದ ಸರ್ಕಾರ ವೈದ್ಯರ ನೇಮಕಕ್ಕೆ ಮುಂದಾಗಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಒತ್ತಾಯಿಸಿದರು.
ಪಟ್ಟಣದ ಪಶು ಸಂಗೋಪನಾ ಮತ್ತು ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ 2021-22ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ನಿರ್ಮಾಣಗೊಂಡಿರುವ ಪಶು ಆಸ್ಪತ್ರೆಯ ಸಭಾಂಗಣವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಈಗಾಗಲೇ ಪಶು ವೈದ್ಯರ ಕೊರತೆ ಇರುವುದು ಸರ್ಕಾರದ ಗಮನದಲ್ಲಿದೆ. ಅದಕ್ಕಾಗಿಯೇ ರಾಜ್ಯದಲ್ಲಿ 400 ವೈದ್ಯರು ಹಾಗೂ 200 ಸಿಬ್ಬಂದಿ ನಿಯೋಜಿಸಲು ತೀರ್ಮಾನಿಸಲಾಗಿದೆ. ಜಾನುವಾರುಗಳ ಆರೋಗ್ಯ ಹಾಗೂ ರೈತರ ಹಿತದೃಷ್ಟಿಯಿಂದ ಸರ್ಕಾರ ಜರೂರಾಗಿ ವೈದ್ಯರ ನೇಮಕಕ್ಕೆ ಕ್ರಮವಹಿಸಬೇಕೆಂದು ಎಂದು ಮನವಿ ಮಾಡಿದರು.
ಕೆಆರ್ಐಡಿಲ್ ಪಟ್ಟಣದ ಪಶು ಆಸ್ಪತ್ರೆ ಸಭಾಂಗಣದ ಕಟ್ಟಡವನ್ನು ಉತ್ತಮ ರೀತಿ ನಿರ್ಮಿಸಿದೆ. ಇದನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಿ. ರಾಸುಗಳಿಗೆ ಉತ್ತಮ ಚಿಕಿತ್ಸೆ ನೀಡುವ ಮೂಲಕ ವೈದ್ಯರು ಕೆಲಸ ಮಾಡಿ ಎಂದರು.
ನಗರಸಭೆ ಸದಸ್ಯೆ ಭಾಗ್ಯಾ, ಮಂಜುನಾಥ್, ನಗರಸಭೆ ಪ್ರಭಾರ ಪೌರಾಯುಕ್ತ ಪ್ರಸನ್ನ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಜಿ.ಪಂ ಮಾಜಿ ಸದಸ್ಯ ಯೋಗೇಶ್, ಚಂದ್ರು, ಪಶು ವೈದ್ಯಾಧಿಕಾರಿ ಡಾ.ಮುತ್ತುರಾಜು, ಡಾ.ಶಿವಕುಮಾರ್, ಕೆಆರ್ಐಡಿಎಲ್ ಎಇಇ ಚಿಕ್ಕಲಿಂಗಯ್ಯ, ಇಂಜಿನಿಯರ್ ಶೋಭಾ, ಕಾರ್ತಿಕ್, ದಿಲೀಪ್ ಮತ್ತಿತರರಿದ್ದರು.