ಪಿರಿಯಾಪಟ್ಟಣ: ಬ್ಯಾಕ್ಲಾಗ್ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವ ಮೂಲಕ ದಲಿತರಿಗೆ ಉದ್ಯೋಗಾವಕಾಶ ಹೆಚ್ಚಿಸಬೇಕು ಎಂದು ದಸಂಸ ಜಿಲ್ಲಾ ಸಂಚಾಲಕ ಕೆ.ಮಣಿಯಯ್ಯ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ದಸಂಸ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹೆಚ್ಚಳ ಮಾಡಬೇಕು, ಅಂಬೇಡ್ಕರ್ ನಿವಾಸ್ ಯೋಜನೆಯಡಿ ಮನೆ ನಿರ್ಮಿಸಲು ನೀಡುತ್ತಿರುವ ಅನುದಾನವನ್ನು ಕನಿಷ್ಠ 5 ಲಕ್ಷಕ್ಕೆ ಹೆಚ್ಚಳ ಮಾಡಬೇಕು, ಅಂಬೇಡ್ಕರ್ ಅಭಿವೃದ್ಧಿ ನಿಗಮ ಸರ್ಕಾರಿ ಸವಲತ್ತುಗಳನ್ನು ಪಡೆಯಲು ವಿಧಿಸುತ್ತಿರುವ ನಿಬರ್ಂಧಗಳನ್ನು ಸಡಿಲ ಗೊಳಿಸುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಲು ಸಂಘಟಿತರಾಗಿ ಹೋರಾಟ ಮಾಡಬೇಕು ಎಂದರು.
ತಾಲೂಕು ಸಂಚಾಲಕ ಪಿ.ಮಹದೇವ್ ಮಾತನಾಡಿ, ದಲಿತರಿಗೆ ಉದ್ಯೋಗಾವಕಾಶ ಕಡಿಮೆಯಾಗುತ್ತಿದ್ದು, ಸ್ವಂತ ಉದ್ಯೋಗ ಮಾಡಲು ನೀಡುತ್ತಿರುವ ಸವಲತ್ತು ಪಡೆಯಲು ಹರಸಾಹಸ ಮಾಡಬೇಕಾಗಿದೆ. ಸರ್ಕಾರವು ದಲಿತರಿಗೆ ಹೊಸ ಯೋಜನೆಗಳನ್ನು ಜಾರಿಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕಬೇಕಿದೆ ಎಂದು ತಿಳಿಸಿದರು.
ಜಿಲ್ಲಾ ಸಂಘಟನಾ ಸಂಚಾಲಕರಾದ ಸಣ್ಣಸ್ವಾಮಿ, ಲಿಂಗಯ್ಯ, ಬಿ.ಕೆ.ಈಶ್ವರ್, ಸಂಘಟನಾ ಸಂಚಾಲಕರಾದ ಎಚ್.ಎಸ್.ಜಯಣ್ಣ ಸಿ.ಸಿ.ನಾಗೇಶ್, ಬಿ.ಆರ್.ರಾಜಯ್ಯ, ಬೆಳ್ಳಯ್ಯ, ಸಿ.ಎಸ್.ಪ್ರಕಾಶ್ ಇತರರು ಹಾಜರಿದ್ದರು.