ಬೆಂಗಳೂರು: ಮೈಸೂರು ರಸ್ತೆಯ ಸಿರ್ಸಿ ವೃತ್ತದ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿದ್ದು, ಕಾರಿನಲ್ಲಿದ್ದ ಯುವಕ- ಯುವತಿ ಕಾರನ್ನು ರಸ್ತೆಯಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಕಾರು ಮಾಲೀಕ ಸಂಬಂಧಿಯೊಬ್ಬರ ಜತೆ ಹೈದರಾಬಾದ್ನಿಂದ ಬನಶಂಕರಿಯಲ್ಲಿರುವ ಮನೆಗೆ ಕಾರಿನಲ್ಲಿ ಬರುತ್ತಿದ್ದಾಗ ಶನಿವಾರ ಬೆಳಗಿನ ಜಾವ 4.30ರಲ್ಲಿ ಮೈಸೂರು ರಸ್ತೆಯ ಸಿರ್ಸಿ ವೃತ್ತದ ಬಳಿ ಡಿವೈಡರ್ಗೆ ಡಿಕ್ಕಿಯಾಗಿದೆ. ಪರಿಣಾಮ ಕಾರಿನ ಮುಂಭಾಗದ ಎಡಬದಿ ಸಂಪೂರ್ಣವಾಗಿ ನಜ್ಜುಗುಜ್ಜಾ ಗಿದೆ. ಕಾರಿನಲ್ಲಿದ್ದ ಯುವಕ ಹಾಗೂ ಯುವತಿಗೆ ಸಣ್ಣಪುಟ್ಟ ಗಾಯವಾಗಿದೆ. ಇದಾದ ಬಳಿಕ ಅದೇ ಕಾರಿನಲ್ಲಿ ಮನೆಗೆ ತೆರಳಲು ಕಾರು ಮಾಲೀಕ ಪ್ರಯತ್ನಿಸಿದರೂ ಕಾರು ಸ್ಟಾರ್ಟ್ ಆಗಿರಲಿಲ್ಲ. ಮೊದಲೇ ಗಾಯಗೊಂಡಿದ್ದ ಅವರು ಏನು ಮಾಡಬೇಕೆಂದು ತೋಚದೇ ಕಾರನ್ನು ನಡುರಸ್ತೆಯಲ್ಲೇ ಬಿಟ್ಟು ಮನೆಗೆ ತೆರಳಿದ್ದಾರೆ.
ನಡುರಸ್ತೆಯಲ್ಲಿ ಕಾರು ನಿಂತ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾದ ಕಾರಣ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ಸ್ಥಳಕ್ಕೆ ಧಾವಿಸಿದ ಚಿಕ್ಕಪೇಟೆ ಸಂಚಾರ ಪೊಲೀಸರು ಕಾರನ್ನು ಟೋಯಿಂಗ್ ಮೂಲಕ ಠಾಣೆಗೆ ತಂದಿದ್ದಾರೆ. ಬಳಿಕ ಕಾರು ಮಾಲೀಕನ ಪರವಾಗಿ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮನು ಎಂಬಾತ ಠಾಣೆಗೆ ಬಂದು ಮಾಲೀಕರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಭಾನುವಾರ ಬರುತ್ತಾರೆ ಎಂದು ತಿಳಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಕಾರಿನಲ್ಲಿ ಮದ್ಯದ ಬಾಟಲಿಗಳಿದ್ದವು, ಕಾರು ಚಾಲಕ ಕುಡಿದ ಮತ್ತಿನಲ್ಲಿದ್ದ ಹಿನ್ನೆಲೆಯಲ್ಲಿ ಡಿವೈಡರ್ಗೆ ಡಿಕ್ಕಿಯಾಗಿರುವ ಸಾಧ್ಯತೆಗಳಿವೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಚಿಕ್ಕಪೇಟೆ ಸಂಚಾರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.