ನವದೆಹಲಿ: ಟೀಮ್ ಇಂಡಿಯಾದ ಹಾಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವಧಿ ಹಾಲಿ ಏಕದಿನ ವಿಶ್ವಕಪ್ ಟೂರ್ನಿಯೊಂದಿಗೆ ಮುಕ್ತಾಯಗೊಳ್ಳಲಿದೆ. ಆದರೆ ಅವರ ಭವಿಷ್ಯ ಇನ್ನೂ ನಿಗೂಢವಾಗಿಯೇ ಉಳಿದಿದೆ. ಒಂದು ವೇಳೆ ಅವರು ಹುದ್ದೆಯಲ್ಲಿ ಮುಂದುವರಿಯಲು ಬಯಸಿದರೂ, ಮತ್ತೆ ನಡೆಯಲಿರುವ ಕೋಚ್ ಆಯ್ಕೆ ಪ್ರಕ್ರಿಯೆಯ ವೇಳೆ ಮರುಅರ್ಜಿ ಸಲ್ಲಿಸಬೇಕಾಗುತ್ತದೆ. ಹೀಗಾಗಿ ವಿಶ್ವಕಪ್ ಬೆನ್ನಲ್ಲೇ ಆಸ್ಟ್ರೆಲಿಯಾ ವಿರುದ್ಧ ತವರಿನಲ್ಲಿ ನಡೆಯಲಿರುವ 5 ಪಂದ್ಯಗಳ ಟಿ20 ಸರಣಿಯ ವೇಳೆ ಎನ್ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಹಂಗಾಮಿ ಕೋಚ್ ಆಗಿ ಕಾರ್ಯನಿರ್ವಹಿಸುವ ನಿರೀಕ್ಷೆ ಇದೆ.
ಸದ್ಯದ ಪ್ರಕಾರ, 51 ವರ್ಷದ ದ್ರಾವಿಡ್ ವಿಶ್ವಕಪ್ ಬಳಿಕ ಹುದ್ದೆಯಲ್ಲಿ ಮುಂದುವರಿಯಲು ಬಯಸುವ ಸಾಧ್ಯತೆ ಕಡಿಮೆ ಇದೆ. ಬದಲಾಗಿ ಅವರು ಐಪಿಎಲ್ ತಂಡವೊಂದರ ಕೋಚ್ ಹುದ್ದೆಯತ್ತ ಒಲವು ತೋರುವ ಸಾಧ್ಯತೆಗಳಿವೆ.
ಇನ್ನು ಲೋಧಾ ಸಮಿತಿ ಶಿಫಾರಸಿನ ಅನ್ವಯ ರೂಪುಗೊಂಡಿರುವ ಬಿಸಿಸಿಐ ನಿಯಮಾವಳಿಯ ಪ್ರಕಾರ, ದ್ರಾವಿಡ್ ಹುದ್ದೆಯಲ್ಲಿ ಮುಂದುವರಿಯಲು ಬಯಸಿದರೂ, ಹೊಸ ಅವಧಿಗೆ ಕೋಚ್ ನೇಮಕಕ್ಕೆ ಮತ್ತೆ ಆಯ್ಕೆ ಪ್ರಕ್ರಿಯೆ ನಡೆಸಬೇಕಾಗುತ್ತದೆ. ನ. 19ರಂದು ವಿಶ್ವಕಪ್ ಫೈನಲ್ ನಡೆದರೆ, ಅದಾದ 4 ದಿನಗಳಲ್ಲೇ ಅಂದರೆ ನ.23ರಿಂದ ಆಸೀಸ್ ವಿರುದ್ಧ ಟಿ20 ಸರಣಿ ನಡೆಯಲಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಜಸ್ಪ್ರೀತ್ ಬುಮ್ರಾ, ಕೆಎಲ್ ರಾಹುಲ್ ಸಹಿತ ಪ್ರಮುಖ ಕ್ರಿಕೆಟಿಗರು ಈ ಸರಣಿಯಿಂದ ವಿಶ್ರಾಂತಿ ಪಡೆಯುವ ಸಾಧ್ಯತೆಗಳಿವೆ.
ದ್ರಾವಿಡ್ ಗೈರಿನಲ್ಲಿ ಯಾವಾಗಲೂ ಲಕ್ಷ್ಮಣ್ ಹಂಗಾಮಿ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ. ವಿಶ್ವಕಪ್ ನಂತರವೂ ಅದು ಮುಂದುವರಿಯಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಮೈಸೂರು ದಸರಾ ವೈಭವಕ್ಕೆ ಮನಸೋತ ಆಸೀಸ್ ಮಾಜಿ ಕ್ರಿಕೆಟಿಗ ಹೇಡನ್ ಪುತ್ರಿ!