ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಯ ಸರಿಯಾದ ಸುಳಿವು ಸಿಗದೇ ಕೃಷಿ ಕಾರ್ಯಗಳಿಗೆ ಹಿನ್ನಡೆ ಉಂಟಾಗುತ್ತಿದೆ.
ಈಗಷ್ಟೇ ಚುನಾವಣೆ ಕಾವಿನಿಂದ ಹೊರ ಬಂದು ಕೂಲಿ ಕಾಮಿರ್ಕರು ಕೆಲಸದತ್ತ ಮರಳುತ್ತಿದ್ದರೂ ಮಳೆಯ ಅಭಾವದಿಂದಾಗಿ ಉದ್ಯೋಗ ವಂಚಿತರಾಗುತ್ತಿದ್ದಾರೆ.
ಪ್ರತಿ ವರ್ಷ ಇಷ್ಟೊತ್ತಿಗೆ ಹೊಲ ಹಸನು ಮಾಡಿ ಬಿತ್ತನೆಗೆ ಹದಗೊಳಿಸುವ ಕಾರ್ಯ ರೈತರಿಂದ ನಡೆಯುತ್ತಿತ್ತು. ಕಳೆದ ವಾರ ಒಂದಿಷ್ಟು ಮಳೆ ಸುರಿದಿದ್ದರಿಂದ ರೈತರು ಹುಮ್ಮಸ್ಸಿನಿಂದ ಉಳುಮೆಗೆ ಸಜ್ಜಾಗಿದ್ದರು. ಆದರೆ, ಮುಂದೆ ಮಳೆ ಮಾಯವಾಗಿದ್ದರಿಂದ ಮತ್ತೆ ನಿರಾಸೆಯ ಕಾಮೋರ್ಡ ಆವರಿಸಿದೆ.
ರೈತರು ರೆಂಟೆ, ಕುಂಟೆ ಹೊಡೆಯುವುದಕ್ಕೆ ಸಜ್ಜಾಗಿದ್ದಾರೆ. ಆದರೆ, ಮಳೆ ಇಲ್ಲದೆ ಬಿರುಸುಗೊಂಡ ಭೂಮಿ ಹದಗೊಳ್ಳುತ್ತಿಲ್ಲ. ಹೆಚ್ಚು ಮಳೆಯಾದರೆ ಮೆದುಗೊಳ್ಳುತ್ತಿತ್ತು. ಇದೀಗ ಟ್ರಾ$್ಯಕ್ಟರ್ಗಳಿಂದ ರೆಂಟೆ ಹೊಡೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಇದು ಮುಂಗಾರು ಹಂಗಾಮು ತಡವಾಗುವುದಕ್ಕೆ ಕಾರಣವಾಗಲಿದೆ ಎಂದು ಕೃಷಿಕರು ಚಿಂತಿತರಾಗಿದ್ದಾರೆ.
ಜಿಲ್ಲೆಯಲ್ಲಿ ಶುಷ್ಕ ಹಾಗೂ ಬಿಸಿ ವಾತಾವರಣ ಮುಂದುವರಿದಿದೆ. ಪ್ರತಿ ವರ್ಷದಂತೆ ಜೂನ್ ಮೊದಲ ವಾರ ನೈಋತ್ಯ ಮಾನ್ಸೂನ್ ಮಳೆ ಬರದೇ ಹೋದರೂ ಉತ್ತಮ ಮುಂಗಾರಿನ ನಿರೀೆಯಲ್ಲಿ ಹವಾಮಾನ ಇಲಾಖೆ ಇದೆ. ಆದರೆ, ಸದ್ಯಕ್ಕೆ ಮಳೆಯಾಗದೇ ಕೃಷಿಕರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.
ಮುಂದಿನ ಎರಡು ವಾರಗಳಲ್ಲಿ ಆಗಸದಲ್ಲಿನ ಬೆಳವಣಿಗೆಗಳನ್ನು ನೋಡಿಕೊಂಡು ನಿಖರ ಹವಾಮಾನ ಹಾಗೂ ಮಳೆಯ ಪ್ರಮಾಣವನ್ನು ಹವಾಮಾನ ಇಲಾಖೆ ತಿಳಿಸಿಕೊಡಲಿದೆ. ಅಲ್ಲಿಯವರೆಗೂ ರೈತರಿಗೆ ಮುಂಗಾರಿನ ಸರಿಯಾದ ಮಾಹಿತಿ ಲಭ್ಯವಾಗುವುದಿಲ್ಲ.
ಮುಂಗಾರು ಪ್ರಾರಂಭವಾಗುವ ನಿಖರ ಸಮಯ ಮತ್ತು ಸ್ಥಳವನ್ನು ತಿಳಿದುಕೊಳ್ಳುವ ಮೂಲಕ ಮತ್ತು ಮಾನ್ಸೂನ್ ಆರಂಭಿಕ ಮಳೆ ಹಾಗೂ ನಂತರದ ಶುಷ್ಕ ಅವಧಿ ಅಂದರೆ ಮಳೆ ಇಲ್ಲದ ಅವಧಿ, ಮುಂತಾದ ವಿಷಯಗಳನ್ನು ತಿಳಿದುಕೊಂಡು ರೈತರು ಸೂಕ್ತ ಸಮಯದಲ್ಲಿ ಬಿತ್ತನೆ ಮಾಡುತ್ತಾರೆ. ಹಾಗಾಗಿ, ಹವಾಮಾನ ಇಲಾಖೆಯ ಸೂಚನೆಗಳಿಗೆ ರೈತ ಸಮುದಾಯ ಕಾಯುತ್ತಿದೆ.
ಹವಾಮಾನ ಇಲಾಖೆ ಪ್ರಕಾರ ಭಾರತೀಯ ಉಪಖಂಡಕ್ಕೆ ಉತ್ತಮ ಮಳೆ ಇದೆ. ಆದರೆ, ಸದ್ಯದ ಪರಿಸ್ಥಿತಿ ಮುಂಗಾರು ವಿಳಂಬಗೊಳಿಸುವ ಸಾಧ್ಯತೆ ಹೆಚ್ಚಿಸಿದೆ.
ಈಗ ಮಳೆಯಾದರೂ ಬಿತ್ತನೆಗೆ ಹದಗೊಳಿಸಲು ಎರಡು ವಾರವಾದರೂ ಬೇಕು. ಈಗಲೂ ಉರಿ ಬಿಸಿಲು ಇದ್ದು, ಭೂಮಿ ಸುಡುತ್ತಿದೆ. ಹಾಗಾಗಿ ಮೇ ಕೊನೇ ವಾರದ ವರೆಗೂ ಇದೇ ವಾತಾವರಣ ಮುಂದುವರಿದರೆ ಬಿತ್ತನೆ ತಡವಾಗಲಿದೆ. ಒಂದು ವೇಳೆ ಮುಂಗಾರು ಬಿತ್ತನೆ ವಿಳಂಬವಾಗುತ್ತ ಹೋದರೆ ಇಳುವರಿ ಮೇಲೆ ಪರಿಣಾಮ ಬೀರಲಿದೆ.
ಕೃಷಿ ಇಲಾಖೆ ಸಜ್ಜು:
ಈ ಮಧ್ಯೆ ಉತ್ತಮ ಮುಂಗಾರಿನ ಭರವಸೆಯೊಂದಿಗೆ ಕೃಷಿ ಇಲಾಖೆ ಬಿತ್ತನೆ ಬೀಜ, ರಸಗೊಬ್ಬರ ಇತ್ಯಾದಿಗಳನ್ನು ಸಂಗ್ರಹ ಮಾಡಿಕೊಂಡಿದೆ. ಮೇ ಕೊನೆಯ ವಾರದಲ್ಲಿ ವಿತರಣೆ ಮಾಡಲು ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ದಾಸ್ತಾನು ಮಾಡುತ್ತಿದೆ.
ಕಳೆದ ಎರಡು ತಿಂಗಳಿನ ಹವಾಮಾನ, ಉಷ್ಣತೆ ಇತ್ಯಾದಿಗಳನ್ನು ಪರಿಶೀಲಿಸಿದಾಗ ಮುಂಗಾರಿನ ಬಗ್ಗೆ ರೈತರಲ್ಲಿ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡಿವೆ. ಮೇ ಕೊನೆಯ ವಾರದಲ್ಲಿ ಆಗಸದಲ್ಲಿನ ಬೆಳವಣಿಗೆಗಳನ್ನು ನೋಡಿಕೊಂಡು ನಿಖರವಾದ ಮಾಹಿತಿ ಒದಗಿಸುವ ಕಾರ್ಯ ಇಲಾಖೆಯಿಂದ ನಡೆಯಲಿದೆ.
- ಡಾ. ರವಿ ಪಾಟೀಲ, ಕೃಷಿ ಹವಾಮಾನ ತಜ್ಞ, ಕೃಷಿ ವಿವಿ ಧಾರವಾಡ