ಭದ್ರಾವತಿ: ನಗರಸಭೆ ನೂತನ ಅಧ್ಯಕ್ಷರಾಗಿ 34ನೇ ವಾರ್ಡ್ ಸದಸ್ಯೆ ಲತಾ ಚಂದ್ರಶೇಖರ್ ಸೋಮವಾರ ಅವಿರೋಧವಾಗಿ ಆಯ್ಕೆಯಾದರು.
ಸಾಮಾನ್ಯ ಮಹಿಳಾ ಮೀಸಲು ಸ್ಥಾನಕ್ಕೆ ಮೀಸಲಾಗಿರುವ ಅಧ್ಯಕ್ಷೆ ಸ್ಥಾನವನ್ನು ಒಪ್ಪಂದದಂತೆ ಹಂಚಿಕೆ ಮಾಡಿಕೊಳ್ಳಲಾಗಿತ್ತು. ಅದರಂತೆ ಗೀತಾರಾಜ್ಕುಮಾರ್, ಅನುಸುಧಾ ಮೋಹನ್ ಪಳನಿ, ಶ್ರುತಿ ವಸಂತಕುಮಾರ್ ಅಧಿಕಾರ ನಡೆಸಿದ್ದರು. ಇದೀಗ ಕೊನೆ ಅವಧಿಗೆ ಲತಾ ಚಂದ್ರಶೇಖರ್ ಅವಿರೋಧವಾಗಿ ಆಯ್ಕೆಯಾದರು. ಶ್ರುತಿ ಒಪ್ಪಂದದಂತೆ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಸೋಮವಾರ ಚುನಾವಣೆೆ ನಿಗದಿಯಾಗಿತ್ತು.
ಉಪವಿಭಾಗಾಧಿಕಾರಿ ಸತ್ಯನಾರಾಯಣ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಶಾಸಕ ಬಿ.ಕೆ.ಸಂಗಮೆಶ್ವರ್ ನೂತನ ಅಧ್ಯಕ್ಷೆ ಲತಾ ಚಂದ್ರಶೇಖರ್ ಮಾತನಾಡಿ, ಹಿಂದಿನ ಅಧ್ಯಕ್ಷರು ಒಪ್ಪಂದದಂತೆ ಆಡಳಿತ ಬಿಟ್ಟುಕೊಟ್ಟಿದ್ದಾರೆ. ಹೊಸ ಅಧ್ಯಕ್ಷರು ಹಿಂದೆ ಅಧ್ಯಕ್ಷರಾಗಿದ್ದವರ ಸಹಕಾರ, ಸಲಹೆಗಳನ್ನು ಪಡೆದು ಅಧಿಕಾರ ನಡೆಸಿದರೆ ಊರಿನ ಅಭಿವೃದ್ಧಿ ಸಾಧ್ಯವಾಗುತ್ತದೆ. ಸಾರ್ವಜನಿಕರ ಕೆಲಸಗಳನ್ನು ಅಂದೇ ಮಾಡಿಕೊಡುವ ಮೂಲಕ ಜನಸ್ನೇಹಿ ಆಡಳಿತ ನಡೆಸಬೇಕು ಎಂದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಲತಾ, ಎಲ್ಲ ಅಧಿಕಾರಿ, ಸಿಬ್ಬಂದಿ, ಸದಸ್ಯರ ಸಹಕಾರ ಹಾಗೂ ಬೆಂಬಲ ಪಡೆದು ಉತ್ತಮ ಆಡಳಿತ ನಡೆಸುತ್ತೇನೆ. ನಗರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಪೌರಾಯುಕ್ತ ಪ್ರಕಾಶ್ ಎಂ ಚೆನ್ನಪ್ಪನವರ್, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಉಪಾಧ್ಯಕ್ಷೆ ಸರ್ವಮಂಗಳಾ ಬೈರಪ್ಪ, ಸದಸ್ಯರಾದ ಕದಿರೇಶ್, ಬಿ.ಕೆ.ಮೋಹನ್, ಬಿ.ಟಿ.ನಾಗರಾಜ್, ಅನುಪಮಾ ಚನ್ನೇಶ್, ಶ್ರುತಿ ವಸಂತಕುಮಾರ್, ಅನುಸುಧಾ ಮೋಹನ್, ಸುದೀಪ್, ಚನ್ನಪ್ಪ ಇತರರಿದ್ದರು. ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಲತಾ ಚಂದ್ರಶೇಖರ್ ಅವರನ್ನು ನಗರಸಭೆ ಸದಸ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಸನ್ಮಾನಿಸಿದರು.
ಮೊಳಗಿದ ಜೈ ಶ್ರೀರಾಮ್ ಜಯಘೋಷ
ಅಯೋಧ್ಯೆಯಲ್ಲಿ ರಾಮಮಂದಿರ ಪ್ರತಿಷ್ಠಾಪನೆ ದಿನವೇ ಅಧ್ಯಕ್ಷರ ಚುನಾವಣೆ ನಿಗದಿಯಾಗಿತ್ತು. ಅದರಂತೆ ನೂನತ ಅಧ್ಯಕ್ಷರ ಆಯ್ಕೆ ಆಗುತ್ತಿದ್ದಂತೆ ಸಭಾಂಗಣದಲ್ಲಿದ್ದ ಶಾಸಕ ಬಿ.ಕೆ.ಸಂಗಮೇಶ್ವರ್ ಆದಿಯಾಗಿ ಎಲ್ಲ ಸದಸ್ಯರು ಜೈ ಶ್ರೀರಾಮ್ ಎಂದು ಜಯಘೋಷ ಕೂಗಿದರು. ಶ್ರೀರಾಮ ಕೇವಲ ಬಿಜೆಪಿ ಅವರಿಗೆ ಸೇರಿಲ್ಲ. ರಾಮನನ್ನು ಎಲ್ಲರೂ ಪೂಜಿಸುತ್ತಾರೆ. ಮನೆ, ಮನದಲ್ಲೂ ರಾಮ ನೆಲೆಸಿದ್ದಾನೆ ಎಂದು ಶಾಸಕರು ಹೇಳಿದರು.