ಲಕ್ಷ್ಮೇಶ್ವರ: ತಾಲೂಕಿನಲ್ಲಿ ಮೆಕ್ಕೆಜೋಳದ ಬಿತ್ತನೆ ಕ್ಷೇತ್ರ ಹೆಚ್ಚುತ್ತಿರುವುದರ ಜತೆಗೆ ರೋಗಬಾಧೆಯೂ ಉಲ್ಬಣಿಸುತ್ತಿದೆ.
ಪ್ರಸಕ್ತ ಮುಂಗಾರಿನಲ್ಲಿ ತಾಲೂಕಿನಲ್ಲಿ 10 ಸಾವಿರ ಹೆಕ್ಟೇರ್ಗೂ ಹೆಚ್ಚು ಕ್ಷೇತ್ರದಲ್ಲಿ ಗೋವಿನಜೋಳ ಬಿತ್ತನೆ ಮಾಡಲಾಗಿದೆ. ಹರದಗಟ್ಟಿ ಗ್ರಾಮದಲ್ಲಿ ಮೆಕ್ಕೆಜೋಳಕ್ಕೆ ಲದ್ದಿಹುಳು ಕಾಟ ಆವರಿಸಿದ್ದು, ಲದ್ದಿಹುಳು ಬೆಳೆಯ ಸುಳಿಯನ್ನೇ ತಿಂದುಹಾಕುತ್ತಿವೆ. ರೋಗದ ನಿಯಂತ್ರಣಕ್ಕೆ ರೈತರು ಹರಸಾಹಸ ಪಡುತ್ತಿದ್ದಾರೆ. ರೋಗಕ್ಕೆ ಬೆಳೆ ಒಣಗಿ ರೈತರು ಕಾಂಗಾಲಾಗಿದ್ದಾರೆ.
ಪೋಷಕಾಂಶದ ಕೊರತೆಯಿಂದ ಬೆಳೆ ಕಂದು ಬಣ್ಣಕ್ಕೆ ತಿರುಗಿ ಗರಿಗಳು ಒಣಗಿ ಉದುರುತ್ತಿವೆೆ. ಪ್ರತಿ ಎಕರೆ ಗೋವಿನ ಜೋಳದ ಬಿತ್ತನೆ, ಕ್ರಿಮಿನಾಶಕ ಸಿಂಪಡಣೆ, ಎಡೆ ಹೊಡೆಯುವುದು ಸೇರಿ ಎಕರೆಗೆ 10 ಸಾವಿರ ರೂ ಖರ್ಚು ಮಾಡಿದ್ದಾರೆ. ಬೆಳೆ ಭರವಸೆಯ ಹಿನ್ನೆಲೆ ಬಡ್ಡಿಸಾಲ ಮಾಡಿದ್ದಾರೆ. ಬೆಳೆ ಕಣ್ಣ ಮುಂದೆಯೇ ಒಣಗುತ್ತಿರುವುದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ ಎನ್ನುತ್ತಾರೆ ಭಾರತೀಯ ಕಿಸಾನ ಸಂಘದ ತಾಲೂಕಾಧ್ಯಕ್ಷ ಟಾಕಪ್ಪ ಸಾತಪುತೆ.
ದ್ರವರೂಪದ ರಸಗೊಬ್ಬರ ಮತ್ತು ಮೈಕ್ರೋನ್ಯೂಟ್ರಂಟ್ ಬೆರೆಸಿ ಮೆಕ್ಕೆಜೋಳಕ್ಕೆ ಸಿಂಪಡಣೆ ಮಾಡಬೇಕು. ಬಿತ್ತನೆ ಪೂರ್ವದಲ್ಲಿ ಮಣ್ಣಿನ ಪೋಷಕಾಂಶದ ಕೊರತೆ ನೀಗಿಸಲು ಕ್ರಮ ಕೈಗೊಳ್ಳಬೇಕು, ಬೀಜೋಪಚಾರ ಮಾಡಬೇಕು. ಒಂದೇ ಬೆಳೆ ಬೆಳೆಯುವುದು
ಈ ರೋಗಕ್ಕೆ ಕಾರಣ.
-ಚಂದ್ರಶೇಖರ ನರಸಮ್ಮನವರ, ಕೃಷಿ ಅಧಿಕಾರಿ