ನವದೆಹಲಿ: ಇಲ್ಲಿನ ಇಂಡಿಯಾ ಗೇಟ್ ಬಳಿ ಹೊಸರ್ಷ ಆಚರಣೆ ಸಂಭ್ರಮ ಮನೆ ಮಾಡಿತ್ತು. ಸಾಯಂಕಾಲದ ವೇಳೆ ಲಕ್ಷಾಂತರ ಜನರು ಸೇರಿ ನ್ಯೂ ಇಯರ್ ಸೆಲೆಬ್ರೇಶನ್ ಮಾಡಿದ ಕಾರಣ ವಿಪರೀತವಾಗಿ ಟ್ರಾಫಿಕ್ ಜಾಮ್ ಉಂಟಾಗಿ ಸಮಸ್ಯೆಯಾಯಿತು.
ಟ್ರಾಫಿಕ್ ಜಾಮ್ ನಿಂದ ಪರದಾಡುತ್ತಿದ್ದ ವಾಹನ ಚಾಲಕರ ಸಂಚಾರವನ್ನು ಸುಗಮಗೊಳಿಸುವ ಕಾರಣಕ್ಕೆ ಇಂಡಿಯಾ ಗೇಟ್ ಸುತ್ತಮುತ್ತ ಇರುವ ಒಟ್ಟು ಐದು ಮೆಟ್ರೋ ಸ್ಟೇಶನ್ಗಳ ಪ್ರವೇಶ ಹಾಗೂ ನಿರ್ಗಮನ ಗೇಟ್ಗಳೆರನ್ನೂ ಒಂದು ಗಂಟೆ ಕಾಲ ಮುಚ್ಚಲಾಗಿತ್ತು.
ಮಂಗಳವಾರ ಮಧ್ಯರಾತ್ರಿ ಕೂಡ ಅಧಿಕ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆಯಲ್ಲಿ ರಾಜೀವ್ ಚೌಕ್ ಮೆಟ್ರೋ ಸ್ಟೇಶನ್ನ ನಿರ್ಗಮನ ದ್ವಾರವನ್ನು ರಾತ್ರಿ 9ಗಂಟೆ ನಂತರ ನಿರ್ಬಂಧಿಸಲಾಗಿತ್ತು.
ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ವಿರೋಧಿ ಪ್ರತಿಭಟನೆಗಳೂ ನಡೆಯುತ್ತಿದ್ದು ಇಂದು ಸಂಜೆ ಒಂದೆಡೆ ಪ್ರತಿಭಟನಾಕಾರರ ದಂಡು ಇಂಡಿಯಾ ಗೇಟ್ ಬಳಿ ಹೋಗಿದ್ದರೆ, ಮತ್ತೊಂದೆಡೆ ಹೊಸವರ್ಷ ಆಚರಣೆಗಾಗಿ ಇಂಡಿಯಾ ಗೇಟ್ಗೆ ಭೇಟಿಕೊಡಲು ಲಕ್ಷಾಂತರ ಮಂದಿ ಬಂದಿದ್ದರು. ಹೀಗಾಗಿ ಇಂಡಿಯಾ ಗೇಟ್ ಸುತ್ತಮುತ್ತ ತೀವ್ರತರನಾದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅದೆಷ್ಟೋ ಕಿಲೋಮೀಟರ್ ದೂರದವರೆಗೆ ವಾಹನಗಳೆಲ್ಲ ನಿಂತೇಬಿಟ್ಟಿದ್ದವು.
ತಾಳ್ಮೆ ಕಳೆದುಕೊಂಡ ಕೆಲವು ವಾಹನ ಸವಾರರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡುವ ಮೂಲಕ ಟ್ರಾಫಿಕ್ ಸಮಸ್ಯೆಯನ್ನು ತಿಳಿಸಿದ್ದಾರೆ. ಕೇವಲ ಇಂಡಿಯಾ ಗೇಟ್ ಬಳಿ ಅಷ್ಟೇ ಅಲ್ಲದೆ, ಮಥುರಾ ರಸ್ತೆಯಲ್ಲೂ ಸಂಚಾರ ಅಸ್ತವ್ಯಸ್ತವಾಗಿತ್ತು.
ಸಂಚಾರಿ ಪೊಲೀಸರು ಟ್ವಿಟರ್ನಲ್ಲಿ ಟ್ರಾಫಿಕ್ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಪ್ರಾರಂಭಿಸಿದರು. ನೊಯ್ಡಾದಿಂದ ಬರುವವರು ಡಿಎನ್ಡಿ ಅಥವಾ ಅಕ್ಷರಧಾಮದ ಮೂಲಕ ಬಂದು ದೆಹಲಿಯನ್ನು ತಲುಪಿ. ಮಥುರಾ ರಸ್ತೆ ಮತ್ತು ಕಳಿಂದಿ ಕುಂಜಿ ರಸ್ತೆಗಳು ಟ್ರಾಫಿಕ್ನಿಂದ ಬಂದ್ ಆಗಿವೆ ಎಂದು ಟ್ವೀಟ್ ಮಾಡಿದ್ದಾರೆ.