ರಾಯಚೂರು: ವಿವಿಧ ಇಲಾಖೆಗಳ ವಸತಿ ನಿಲಯಗಳ ಕಾರ್ಮಿಕರಿಗೆ ವೇತನ ಪಾವತಿಸುವಂತೆ ಒತ್ತಾಯಿಸಿ ರಾಜ್ಯ ವಸತಿ ನಿಲಯಗಳ ಕಾರ್ಮಿಕರ ಸಂಘ ಜಿಲ್ಲಾಧಿಕಾರಿ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿತು.
ನಂತರ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರ್ಗೆ ಮನವಿ ಸಲ್ಲಿಸಿ, ಹೊರ ರಾಜ್ಯದಿಂದ ಆಗಮಿಸಿದ ಜನರನ್ನು ಕ್ವಾರಂಟೈನ್ ಮಾಡಲಾಗಿದ್ದ ವಸತಿ ನಿಲಯಗಳಲ್ಲಿ ಕಾರ್ಮಿಕರು ಕಾರ್ಯ ನಿರ್ವಹಿಸಿದ್ದರೂ ವೇತನ ಪಾವತಿಸದಿರುವುದು ಕುಟುಂಬ ನಿರ್ವಹಣೆಗೆ ಸಂಕಷ್ಟ ಎದುರಾಗಿದೆ ಎಂದು ದೂರಿದರು.
ವರ್ಷ ಪೂರ್ತಿ ಕೆಲಸ, ಸಂಬಳ ಎಂಬ ಕಾರ್ಮಿಕ ಇಲಾಖೆ ಅಧಿಸೂಚನೆ ಪಾಲಿಸಲಾಗುತ್ತಿಲ್ಲ. 2018ರಿಂದ ವೇತನ ಹೆಚ್ಚಳ ಬಾಕಿ ಪಾವತಿ ಮಾಡಲಾಗಿಲ್ಲ. ಇಎಸ್ಐ, ಪಿಎಫ್ ಸೌಲಭ್ಯ ನೀಡದೆ ಕಾರ್ಮಿಕರನ್ನು ದುಡಿಸಿಕೊಳ್ಳಲಾಗುತ್ತಿದೆ. ನಾಲ್ಕು ತಿಂಗಳ ವೇತನ ಪಾವತಿಸಬೇಕು. ಕರ್ನಾಟಕ ಶಿಕ್ಷಣ ಸಂಘದ ಅಡಿ ಬರುವ ವಸತಿ ನಿಲಯ ಕಾರ್ಮಿಕರಿಗೆ 3 ತಿಂಗಳ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ವಸತಿ ನಿಲಯ ಕಾರ್ಮಿಕರಿಗೆ 18 ತಿಂಗಳ ಬಾಕಿ ವೇತನ ಪಾವತಿ ಸೇರಿ ಹಲವು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಜಿ.ಅಮರೇಶ, ಪದಾಧಿಕಾರಿಗಳಾದ ರಂಗನಾಥ, ಕೆ.ಶಿವಯ್ಯ, ಶಿವರಾಜ, ಜಗದೀಶ್, ನರಸಮ್ಮ, ತಿಮ್ಮಲಮ್ಮ, ಲಲಿತಾ, ದೇವಮ್ಮ, ನಾಗಮ್ಮ, ಕಮಲಮ್ಮ ಪಾಲ್ಗೊಂಡಿದ್ದರು.